ಕಲಬುರಗಿಯಲ್ಲಿ ಶುಕ್ರವಾರ ಬಂಜಾರ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದಿಂದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ನಿಧನದ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಲಾಯಿತು
ಕಲಬುರಗಿ: ಬಂಜಾರ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದಿಂದ ನಗರದ ಬಂಜಾರ ಭವನದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ವತಿಯಿಂದ ಬಂಜಾರ ಭವನದಲ್ಲಿ ಶುಕ್ರವಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಶರಣಬಸವಪ್ಪ ಅಪ್ಪ ಅವರ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸನ್ಮಾನ, ಸಾಂಸ್ಕೃತಿಕ ಸೇರಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ಘೋಷಿಸಿದರು. ಬಂಜಾರ ಸಮುದಾಯವೂ ಕೂಡ ದುಃಖದಲ್ಲಿ ಭಾಗಿಯಾಗುತ್ತದೆ ಎಂದು ತಿಳಿಸಿದರು. ನಂತರ ಮೌನಾಚರಣೆ ಮಾಡಲಾಯಿತು.
ಸಮಾಜದ ಗುರುಗಳು, ಗಣ್ಯರು ಸೇರಿದಂತೆ ಯಾರೂ ವೇದಿಕೆಯ ಆಸನಗಳಲ್ಲಿ ಕುಳಿತುಕೊಳ್ಳಲಿಲ್ಲ. ಬದಲಿಗೆ ವೇದಿಕೆ ಮುಂಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮಕ್ಕೆಂದು ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಮಾಜದ ಜನರಿಗೆ ಶರಣಬಸವಪ್ಪ ಅಪ್ಪ ಅವರ ಹೆಸರಲ್ಲಿಯೇ ಪ್ರಸಾದ ವಿತರಿಸಲಾಯಿತು.
ಮುಗಳನಾಗಾಂವದ ಜೇಮಸಿಂಗ್ ಮಹಾರಾಜರು, ಗೊಬ್ಬುರವಾಡಿಯ ಬಳಿರಾಮ ಮಹಾರಾಜರು, ಗುಂತಕಲ್ನ ಕೃಷ್ಣ ಮಹಾರಾಜರು, ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ಶಾಮರಾವ ಪವಾರ, ರಾಜಕುಮಾರ ಜಿ.ರಾಠೋಡ, ಸಂಘದ ಜಿಲ್ಲಾಧ್ಯಕ್ಷ ಹರಿಶ್ಚಂದ್ರ ಎಸ್.ರಾಠೋಡ, ಗೌರವಾಧ್ಯಕ್ಷ ಪ್ರೇಮಸಿಂಗ್ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಬಾಬು ಎಂ.ಜಾಧವ, ರವಿ ನಾಯ್ಕ್, ಭಿಕ್ಕುಸಿಂಗ್ ರಾಠೋಡ, ರಾಜಶೇಖರ ಕೆ.ಪವಾರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.