ಕಮಲಾಪುರ: ಬ್ಯಾಂಕ್, ಫೈನಾನ್ಸ್ನವರ ಕಿರುಕುಳ ತಾಳದೇ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸೆ.28ರಂದು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಸಿರಡೋಣ ಗ್ರಾಮದ ಗಂಗಮ್ಮ ಚಂದ್ರಕಾಂತ ಜಿಂಗೇನವರ (38) ಮೃತ ಮಹಿಳೆ.
ಕಲಬುರಗಿಯ ಕೆಬಿಎಸ್ ಬ್ಯಾಂಕ್ ಸಿಬ್ಬಂದಿ, ಸ್ಪಂದನಾ ಬಿಎಸ್ಎಸ್ಎಸ್ಕೆಎಸ್ ಆಶೀರ್ವಾದ ಭಾರತ ಫೈನಾನ್ಸ್, ಶ್ರೀ ಬನಶಂಕರಿ ಶಿವಗಾಯತ್ರಿ ಫೈನಾನ್ಸ್ ಹಾಗೂ ಲಕ್ಷ್ಮಿ, ಖಾಸೀಮ್ ಎಂಬುವವರ ವಿರುದ್ಧ ಮೃತ ಗಂಗಮ್ಮ ಅವರ ಪತಿ ಚಂದ್ರಕಾಂತ ಧೂಳಪ್ಪ ಜಿಂಗೇನವರ ದೂರು ನೀಡಿದ್ದಾರೆ.
ಶಿರಡೋಣ ಗ್ರಾಮದ ಗಂಗಮ್ಮ ಕಲಬುರಗಿಯ ಸಿದ್ದೇಶ್ವರ ಕಾಲೊನಿಯಲ್ಲಿ ವಾಸವಾಗಿದ್ದರು.
ಕೆಬಿಎಸ್ ಬ್ಯಾಂಕ್ ಸಿಬ್ಬಂದಿ ಸಾಲ ವಸೂಲಾತಿಗೆ ಕಳೆದ ಸೆ.28ರಂದು ಶಿರಡೋಣ ಗ್ರಾಮಕ್ಕೆ ಬಂದಿದ್ದರು. ಗಂಗಮ್ಮ ಸಿಗದಿದ್ದಾಗ ಸಾಲ ವಸೂಲಿಗೆ ಗಂಗಮ್ಮ ಅವರ ತಾಯಿ ಭಾರತಿಬಾಯಿ ಅವರನ್ನು ಕರೆದೊಯ್ದಿದ್ದಾರೆ. ವಿಷಯ ತಿಳಿದ ಗಂಗಮ್ಮ ಸಿರಡೋಣ ಗ್ರಾಮಕ್ಕೆ ಬಂದಿದ್ದಾರೆ. ಮನನೊಂದು ರಸ್ತೆ ಮಧ್ಯದಲ್ಲೇ ವಿಷ ಸೇವಿಸಿದ್ದಾರೆ. ರಸ್ತೆ ಮೇಲೆ ಹೊರಳಾಡುತ್ತಿರುವುದನ್ನು ದಾರಿ ಹೋಕರು ನೋಡಿ ಗಂಗಮ್ಮಳ ಅತ್ತೆ ಶೇಖುಬಾಯಿಗೆ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಗಂಗಮ್ಮ ಮೃತಪಟ್ಟಿದ್ದಾಳೆ.
ಆರ್ಬಿಎಲ್, ಸ್ಪಂದನಾ, ಯೂನಿಟ್, ಕೋಟಕ್ ಬ್ಯಾಂಕ್ಗಳು ಸಹಿತ ಬೇರೆಬೇರೆ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಲ್ಲದೇ, ಅಕ್ರಮವಾಗಿ ಮೀಟರ್ ಬಡ್ಡಿ ನಡೆಸುವವರಿಂದಲೂ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಪತಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇಷ್ಟೊಂದು ಸಾಲ ತೀರಿಸಲು ಮನೆಯನ್ನು ಸಹ ಮಾರಿದ್ದರು. ಆದರೂ ಸಾಲ ತೀರಲಿಲ್ಲ. ₹50 ಸಾವಿರ ಸಾಲಕ್ಕೆ ಮೀಟರ್ ಬಡ್ಡಿಯವರು ₹2 ಲಕ್ಷ ಮಾಡಿದ್ದಾರೆ. ಅಲ್ಲದೇ ಮೈಕ್ರೋ ಲೋನ್ ಪಡೆದ ಬ್ಯಾಂಕ್ ಸಿಬ್ಬಂದಿ ಪ್ರತಿದಿನ ಮನೆಗೆ ಬಂದು ಅವಮಾನ ಮಾಡುತ್ತಿದ್ದರು. ಸಂಘಗಳಲ್ಲಿ ಪಡೆದ ಸಾಲವನ್ನೂ ತೀರಿಸಲಾಗಲಿಲ್ಲ. ಶನಿವಾರ ಬೆಳಿಗ್ಗೆ ಕೆಬಿಎಸ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಹೋದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.