ಅಫಜಲಪುರ: ‘ಬಿಜೆಪಿಯ ನಾಯಕರು ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದಾಗ ರೈತರ ಹಿತಕಾಯುವುದಾಗಿ ಮಾತನಾಡುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಕೃಷಿಕರನ್ನು ರಕ್ಷಿಸುವ ಒಂದೇ ಒಂದು ಯೋಜನೆ ರೂಪಿಸದೆ ಅವರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಪಟ್ಟಣದ ಹೊರ ವಲಯದಲ್ಲಿ ನಿರ್ಮಿಸಲಾದ ಕಿಸಾನ್ ಕಾಟನ್ ಇಂಡಸ್ಟ್ರೀಸ್ ಕಾರ್ಖಾನೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ತೋರಿಕೆ ರಾಜಕೀಯ ಮಾಡುವವರು ತಾವು ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುತ್ತಾರೆ. ಆದರೆ ಅಧಿಕಾರ ಸಿಕ್ಕ ಮೇಲೆ ರೈತರನ್ನು ಕಡೆಗಣಿಸುತ್ತಾರೆ. ನಾವು ರೈತರ ಮಕ್ಕಳು. ಅಂತಹ ರಾಜಕಾರಣ ಮಾಡುವುದಿಲ್ಲ’ ಎಂದರು.
‘ನನ್ನ ಅಧಿಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಲು ಕೃಷಿ ಬೆಲೆ ಆಯೋಗ ರಚಿಸಲಾಗಿತ್ತು. ಈಗ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಕ್ಕರೆ ದರ ಕುಸಿದಾಗ ಕಬ್ಬು ಬೆಳೆಗಾರರಿಗೆ ₹ 1,800 ಕೋಟಿ ನೀಡಿದ್ದೆ. ಸಹಕಾರಿ ಸಂಘಗಳಲ್ಲಿ ಪಡೆದಿದ್ದ ಪ್ರತಿ ರೈತರ ₹ 50 ಸಾವಿರ ಸಾಲವನ್ನು ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಲಾಗಿತ್ತು. ಲೀಟರ್ ಹಾಲಿಗೆ ₹ 5 ಬೆಂಬಲ ಬೆಲೆ ಕೊಟ್ಟು ಹೈನುಗಾರಿಕೆಗೆ ಉತ್ತೇಜನ ನೀಡಲಾಗಿತ್ತು. ಈಗ ಅಂತಹ ಯೋಜನೆಗಳಿಲ್ಲ’ ಎಂದು ಟೀಕಿಸಿದರು.
ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಹತ್ತಿ ಕಾರ್ಖಾನೆಯ ಆರಂಭದಿಂದ ಹತ್ತಿ ಬೆಳೆಗಾರರಿಗೆ ಅನಕೂಲವಾಗಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದರು.
ಆಡಳಿತ ಮಂಡಳಿ ಸದಸ್ಯ ಮತೀನ್ ಪಟೇಲ್ ಮಾತನಾಡಿ, ಈ ಭಾಗದ ಹತ್ತಿ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ಬಹುದೊಡ್ಡ ಸಮಸ್ಯೆ ಆಗಿತ್ತು. ಇದರ ಪರಿಹಾರಕ್ಕೆ ಕಾರ್ಖಾನೆ ಆರಂಭಿಸಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.