ಕಲಬುರ್ಗಿ:ರಾಜ್ಯದ ಉದ್ದಗಲಕ್ಕೂ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಮಹಿಳೆಯರು, ಪಕ್ಷ ನೀಡಿದ ಜವಾಬ್ದಾರಿಗೆ ಬದ್ದರಾಗಿ ಕಾರ್ಯವನ್ನು ನಿರ್ವಹಣೆ ಮಾಡಬೇಕಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನ್ನಪೂರ್ಣ ಹೇಳಿದರು.
ಗುರುವಾರ ಪಕ್ಷದ ಕಚೇರಿಯಲ್ಲಿ ಮಹಾನಗರದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ‘ನಿಮಗೆ ನೀಡಿದ ಜವಾಬ್ದಾರಿಯನ್ನ ಮೊದಲ ಅರಿತುಕೊಳ್ಳಿ. ನಂತರ ಪಕ್ಷ ಸಂಘಟನಗೆ ಮುಂದಾಗಿ. ವ್ಯಕ್ತಿಗೆ ಪ್ರಾಮುಖ್ಯತೆ ನೀಡದೇ, ಸಂಘಟನೆಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವ ಏಕೈಕ ಪಕ್ಷ ಬಿಜೆಪಿಯಾಗಿದೆ’ ಎಂದು ಅವರು ಹೇಳಿದರು.
‘ನಾರಿ ಶಕ್ತಿ, ಮೀಸಲಾತಿ ಬಗ್ಗೆ ಕೇಳುವವರು ನಾವು, ಮನೆಯಲ್ಲಿ ಕುಳಿತರೆ ಸಂಘಟನೆಯಾಗಲಾರದು. ಪಕ್ಷದ ಸಂಘಟನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ನೀಡಿದ ಕೆಲಸ ಹಾಗೂ ಸರ್ಕಾರದ ಅನೇಕ ಮಹಿಳೆಯ ಪರವಿರುವ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕಾಗಿದೆ’ ಎಂದು ಹೇಳಿದರು.
‘ಮುಂಬರುವ ದಿನಗಳಲ್ಲಿ ಮಹಿಳಾ ಮೋರ್ಚಾ ಘಟಕದ ವತಿಯಿಂದ ರಾಜ್ಯದಾದ್ಯಂತ ಅಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಮಾಡಬೇಕಾಗಿದೆ. ಅದರ ಜೊತೆಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಗಸ್ಟ್ 22ರಿಂದ ಒಂದು ವಾರಗಳ ಕಾಲ ರಕ್ಷಾ ಬಂಧನ ಕಾರ್ಯಕ್ರಮವನ್ನು ಮಾಡುವ ಮೂಲಕ ಸಹೋದರತ್ವ ಬೆಳೆಸುವ ಕಾರ್ಯವು ಮಹಿಳಾ ಮೋರ್ಚಾ ವತಿಯಿಂದ ನಡೆಯಬೇಕಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಪಾರ್ಥನೆ ಗೀತೆಯನ್ನು ಸವಿತಾ ಪಾಟೀಲ ಹಾಡಿದರು. ಮಹಾದೇವ ಬೆಳಮಗಿ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿತಾ, ಶೋಭಾ, ಸುವರ್ಣ ವಾಡೆ, ಸೇರಿದಂತೆ ವಿವಿಧ ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.