ಕಲಬುರ್ಗಿ: ಲೇಖಕಿ ಪ್ರೇಮಾ ಹೂಗಾರ ಬರೆದ ಗಝಲ್ ಬಂಧ ಹಾಗೂ ಹಾಯ್ಕುಗಳು ಕೃತಿಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಭಾನುವಾರ ಬಿಡುಗಡೆ ಮಾಡಿದರು.
ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ, ಬೀದರ್ನ ಸಿದ್ಧೇಶ್ವರ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪೋತೆ, ಕುವೆಂಪು ಅವರು ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಿ ಅವುಗಳನ್ನು ದಿಟ್ಟತನದಿಂದ ಎದುರಿಸಿದರು. ಇಂದಿನ ಯುವ ಲೇಖಕರು ಸಾಂಪ್ರದಾಯಿಕತೆಯನ್ನು ಮೀರಿ ಬೆಳೆಯಬೇಕು. ಜಾತಿ ಸಂಕೋಲೆಗಳನ್ನು ಮೀರಿ ಸಮಾಜಮುಖಿಯಾಗಿ ಬೆಳೆಯಬೇಕು. ಎಡ ಬಲ ಪಂಥಕ್ಕೆ ಸೀಮಿತಗೊಳ್ಳದೇ ಮನುಷ್ಯ ಪಂಥದವರಾಗಬೇಕು. ಇದು ಇಂದಿನ ತುರ್ತು ಎಂದರು.
ಗಝಲ್ ಬಂಧ ಕೃತಿಯನ್ನು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ, ಹಾಯ್ಕುಗಳು ಕೃತಿಯನ್ನು ಮಹಿಪಾಲರೆಡ್ಡಿ ಮುನ್ನೂರ್ ಪರಿಚಯಿಸಿದರು.
ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನಿರಗುಡಿ, ಪ್ರೇಮಾ ಹೂಗಾರ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.