ADVERTISEMENT

ಜಾಗತಿಕ ತಲ್ಲಣಗಳಿಗೆ ವಚನಗಳಲ್ಲಿದೆ ಪರಿಹಾರ: ಕಂಬಾರ

ಬಸವೇಶ್ವರ ಸಮಾಜ ಸೇವಾ ಬಳಗದಿಂದ ಸತ್ಕಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 12:24 IST
Last Updated 6 ಫೆಬ್ರುವರಿ 2020, 12:24 IST
ಕಲಬುರ್ಗಿಯ ವಿ.ಟಿ.ಯು ಅತಿಥಿ ಗೃಹದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಬೆಳಿಗ್ಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು
ಕಲಬುರ್ಗಿಯ ವಿ.ಟಿ.ಯು ಅತಿಥಿ ಗೃಹದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಬೆಳಿಗ್ಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು   

ಕಲಬುರ್ಗಿ: ‘ಹನ್ನೆರಡನೆ ಶತಮಾನದಬಸವಾದಿ ಶರಣರು ತಮ್ಮ ಅನುಭಾವದಿಂದ ರಚಿಸಿದ ವಚನಗಳಲ್ಲಿ ಜಾತೀಯತೆ, ಶೋಷಣೆ, ಅಸಮಾನತೆ, ಭ್ರಷ್ಟಾಚಾರ, ಭಯೋತ್ಪಾದನೆ ಸೇರಿದಂತೆಅನೇಕ ಜಾಗತಿಕ ತಲ್ಲಣಗಳಿಗೆ ಪರಿಹಾರ ಇದೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಷ್ಕೃತಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ನಗರದ ವಿ.ಟಿ.ಯು ಅತಿಥಿ ಗೃಹದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಬೆಳಿಗ್ಗೆ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದ ಅವರು,ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸೇರಿದಂತೆ ಸರ್ವ ಸಮಾನತೆಗಾಗಿ ಮಾಡಿದ ಹೋರಾಟ ಒಂದು ಜಾಗತಿಕ ಮೈಲಿಗಲ್ಲು.

‘ವಚನಗಳಿಂದ ನಮ್ಮ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಘನತೆ ಬಂದಿದೆ. ವಚನಗಳನ್ನು ಜಗತ್ತಿನ ಎಲ್ಲಾ ಭಾಷೆಗಳಿಗೆ ತರ್ಜುಮೆ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕನ್ನಡ ಅಕಾಡೆಮಿ ವತಿಯಿಂದ ವಚನಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಕಾರ್ಯ ಜರುಗುತ್ತಿದೆ. ಇಂದಿನ ಯುವ ಪೀಳಿಗೆಗೆ ವಚನಗಳನ್ನು ಹೇಳಿಕೊಟ್ಟು ಅವರಲ್ಲಿ ಮಹಾನ್‌ ಮೌಲ್ಯಗಳನ್ನು ಬಿತ್ತಬೇಕಾಗಿದೆ’ ಎಂದರು

ADVERTISEMENT

‘ಈ ಭಾಗದ ಅನೇಕ ಪ್ರದೇಶಗಳು, ಮಹಾನ್ ಸಾಧಕರ ಕೊಡುಗೆಯ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡಬೇಕು. ಸಾವಳಗಿ ಶಿವಲಿಂಗೇಶ್ವರರು ಜಾತೀಯತೆ, ಶೋಷಣೆ ಮುಂತಾದ ಸಮಸ್ಯೆಗಳ ನಿರ್ಮೂಲನೆಗಾಗಿ ದೊಡ್ಡ ಕ್ರಾಂತಿಯನ್ನು ಮಾಡುವ ಮೂಲಕ ಸಮ-ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಖ್ವಾಜಾ ಬಂದಾನವಾಜ್‍ರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದ ಅವರು, ಇಂದಿಗೂ ಕೂಡಾ ಸಾವಳಗಿ ಜಾತ್ರೆಯಲ್ಲಿ ಹಸಿರು ಹೊದಿಕೆಯನ್ನು ಬಳಸುವ ಮೂಲಕ ಕೋಮು ಸಾಮರಸ್ಯಕ್ಕೆ ನಾಂದಿ ಹಾಡಿದರು. ಇಂತಹ ಸ್ಥಳಗಳ ಬಗ್ಗೆ ವ್ಯಾಪಕವಾದ ಸಂಶೋಧನೆ ಮಾಡಿ ನೈಜ ಇತಿಹಾಸವನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಇತಿಹಾಸ ಸಂಶೋಧಕರಿಗೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ, ಲೇಖಕ ಪ್ರೊ.ಎಚ್.ಬಿ ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯರಾದ ನಾಗೇಂದ್ರಪ್ಪ ಕಲಶೆಟ್ಟಿ, ಮಲ್ಲಿನಾಥ ಮುನ್ನಳ್ಳಿ, ಬಸವರಾಜ ಹೆಳವರ್, ಬಸವರಾಜ ಪುರಾಣೆ, ಅಮರ ಬಂಗರಗಿ, ಸಾಗರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.