(ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಚಿಂಚೋಳಿ: ಹೆಸರು ಬೆಳೆಯ ಕಾಯಿ ಬಿಡಿಸಿಕೊಂಡು ಹೊಲದಿಂದ ಮನೆಗೆ ಟಂಟಂ ಆಟೊದಲ್ಲಿ ಹೋಗುತ್ತಿದ್ದಾಗ ಚಾಲಕ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿದ್ದರಿಂದ ಆಟೊ ಪಲ್ಟಿಯಾಗಿದ್ದು, ಘಟನೆಯಲ್ಲಿ ಆಟೊದಲ್ಲಿದ್ದ ಚಿಮ್ಮನಚೋಡದ ನಿವಾಸಿ ಗುರುಪಾದ ಹಣಮಂತಪ್ಪ ಅಲ್ಲಾಪುರ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆಗೆ ಕಾರಣವಾದ ಟಂಟಂ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ.
2016ರ ಆ.23ರಂದು ಚಿಮ್ಮನಚೋಡದ ಶಾಂತಲಿಂಗಪ್ಪ ರಗಟೆ ಹೊಲದಲ್ಲಿ ಬಳಿ ಘಟನೆ ನಡೆದಿದ್ದು, ಟಂಟಂ ಚಾಲಕನ ನಿಷ್ಕಾಳಜಿ ಮತ್ತು ಅತಿಯಾದ ವೇಗ ಸಾಬೀತಾಗಿದ್ದರಿಂದ ಆರೋಪಿ ಚಿಮ್ಮನಚೋಡದ ಸಂಜೀವಕುಮಾರ ಭೀಮಶಾ ಮಗಿ ಅವರಿಗೆ ಭಾರತೀಯ ದಂಡ ಸಂಹಿತೆ ಕಲಂ 304(ಎ) ಅಡಿಯಲ್ಲಿ 2 ವರ್ಷ ಸಾದಾ ಶಿಕ್ಷೆ ಮತ್ತು ₹2ಸಾವಿರ ದಂಡ ತಪ್ಪಿದ್ದಲ್ಲಿ ಒಂದು ತಿಂಗಳು ಸಾದಾ ಶಿಕ್ಷೆ ಹಾಗೂ ಕಲಂ 338 ಅಡಿಯಲ್ಲಿ 3 ತಿಂಗಳು ಸಾದಾ ಶಿಕ್ಷೆ ಮತ್ತು ₹1 ಸಾವಿರ ದಂಡ ತಪ್ಪಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ, ಕಲಂ 337 ಅಡಿಯಲ್ಲಿ 3 ತಿಂಗಳು ಸಾದಾ ಶಿಕ್ಷೆ ಮತ್ತು ₹500 ದಂಡ, ತಪ್ಪಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ, ಕಲಂ 279 ಅಡಿಯಲ್ಲಿ 3 ತಿಂಗಳು ಸಾದಾ ಶಿಕ್ಷೆ ₹1ಸಾವಿರ ದಂಡ ತಪ್ಪಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಾಲು ಅವರು ಫೆ.23ರಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ ವಾದ ಮಂಡಿಸಿದ್ದರು. ಚಿಂಚೋಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೋಡ್ಲಾ, ಸರ್ಕಲ್ ಇನ್ಸ್ಪೆಕ್ಟರ್ ಇಸ್ಮಾಯಿಲ್ ಶರೀಫ್ ಅವರು ಪ್ರಕರಣದ ತನಿಖೆ ಮಾಡಿ ಆರೋಪಿತನ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸಿಬ್ಬಂದಿಗಳಾದ ಸುರೇಶ, ರಾಜಶೇಖರ ಜಿ ಅವರು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸಿದ್ದರು ಎಂದು ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.