
ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡದಲ್ಲಿರುವ ರೈತ ಉತ್ಪಾದಕ ಕಂಪನಿಯ ರೈತರೊಂದಿಗೆ ವಾಲ್ಮಾರ್ಟ್ ಫೌಂಡೇಷನ್ ಸಿಎಸ್ಆರ್ ಮುಖ್ಯಸ್ಥ ನಿಶಾಂತ ಗುಪ್ತ ಮಂಗಳವಾರ ಸಂವಾದ ನಡೆಸಿದರು.
ವಾಲ್ಮಾರ್ಟ್ ಫೌಂಡೇಷನ್ ವೃತ್ತಿ ಮತ್ತು ಮೈರಾಡಾ ಸಂಸ್ಥೆ ಸಹಯೋಗದಲ್ಲಿ ರೈತರ ಸಬಲೀಕರಣಕ್ಕಾಗಿ ಹಣಕಾಸು ನೆರವು ನೀಡುತ್ತಿದ್ದು, ರೈತರು ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆ ಸೌಲಭ್ಯ, ಬ್ರಾಂಡ್ ಹಾಗೂ ಆದಾಯ ಹೆಚ್ಚಳಕ್ಕೆ ತರಬೇತಿ ಸೇರಿದಂತೆ ವಿವಿಧ ಚಟುವಟಿಕೆಗೆ ನೆರವಾಗುತ್ತಿದೆ.
ರೈತರು ಬಿತ್ತನೆ ಸಮಯದಲ್ಲಿ ಕಂಪನಿಯಿಂದ ಟ್ರ್ಯಾಕ್ಟರ್ ಬಾಡಿಗೆ, ಕೀಟನಾಶಕಗಳ ಸಿಂಪಡಣೆಗೆ ಡ್ರೋನ್ ಯಂತ್ರವನ್ನು ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಇದಲ್ಲದೆ, ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಶ್ರಿತ ಜಮೀನುಗಳಿರುವುದರಿಂದ ನೀರಿನ ಸೌಕರ್ಯ ಮತ್ತು ನೀರಾವರಿ ವ್ಯವಸ್ಥೆಗಳ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮದ ಅಂಗವಾಗಿ ಚಿಮ್ಮನಚೋಡು ರೈತ ಉತ್ಪಾದಕರ ಕಂಪನಿಗೆ ಆಗಮಿಸಿದ ವಾಲ್ಮಾರ್ಟ್ ಫೌಂಡೇಶನ್ ಸಿಎಸ್ಆರ್ ಮುಖ್ಯಸ್ಥರಾದ ಶ್ರೀ ನಿಶಾಂತ್ ಗುಪ್ತ ಅವರಿಗೆ , ಕಂಪನಿಯ ಸದಸ್ಯ ರೈತರು ನೇಗಿಲುನೀಡಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಸಂದರ್ಭದಲ್ಲಿ ವೃತ್ತಿ ಸಂಸ್ಥೆ ಬೆಂಗಳೂರು ಕಚೇರಿಯ ಅರುಣ್, ನರಸಿಂಹಮೂರ್ತಿ, ನಾರಾಯಣರೆಡ್ಡಿ, ಮೈರಾಡಾ ಸಂಸ್ಥೆಯ ತಾಜುದ್ದೀನ್ ಶೇಖ್, ಕಾಂತಪ್ಪ ನಾಗೇಶ್ ಮತ್ತು ಚಿಮ್ಮನ್ಚೋಡ ರೈತ ಉತ್ಪಾದಕರ ಕಂಪನಿಯ ಉಮೇಶ್ ಪಾಟೀಲ ಸೇರಿದಂತೆ ಅನೇಕರು ಇದ್ದರು. ನಂತರ ಪೇಠ ಶಿರೂರು ನೃಪತುಂಗ ರೈತ ಉತ್ಪಾದಕ ಕಂಪನಿಗೆ ಭೇಟಿ ನೀಡಿ ರೈತರ ಜತೆಗೆ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.