
ಚಿಂಚೋಳಿ: ತಾಲ್ಲೂಕಿನ ಕೊಟಗಾ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗುತ್ತಿದ್ದು, ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಆದಿವಾಸಿ ಅಲೆಮಾರಿ ಬುಡಕಟ್ಟು ಅಸಂಘಟಿತ ಕುರಿಗಾಹಿಗಳ ಹೋರಾಟ ಸಮಿತಿ ಮುಖಂಡರು ತಹಶೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮದ ಸ.ನಂ.156ರಲ್ಲಿ 40 ಎಕರೆಗೂ ಅಧಿಕ ಜಮೀನು ಗೋಮಾಳ ಜಮೀನಾಗಿದ್ದು ಇದನ್ನು ನಿರಂತರ ಒತ್ತುವರಿ ಮಾಡಲಾಗುತ್ತಿದೆ. ಇದರಿಂದ ಕುರಿ, ಮೇಕೆ ಸಹಿತ ವಿವಿಧ ಜಾನುವಾರುಗಳು ಮೇಯಿಸಲು ತೊಂದರೆಯಾಗುತ್ತಿದೆ. ಪ್ರಯುಕ್ತ ಗೋಮಾಳ ಜಮೀನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಈ ಜಮೀನು ಜಾನುವಾರುಗಳಿಗೆ ಮೇಯಿಸಲು ಮೀಸಲಿಡಬೇಕು. ರಾಜಕೀಯ ಪ್ರಭಾವ ಬಳಸಿ ಕೆಲವರು ಒತ್ತುವರಿ ಮಾಡುತ್ತಿರುವುದು ಕಂಡುಬಂದಿದ್ದು, ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಹೋರಾಟ ಸಮಿತಿಯ ಗೋಪಾಲ ಗಾರಂಪಳ್ಳಿ, ಅಶೋಕ ಕೊಟಗಾ, ಶಾಮರಾವ್ ಹಳಖೇಡ, ಮಲ್ಲಪ್ಪ ಗಾರಂಪಳ್ಳಿ, ಭೀಮರಾವ್, ರಾಜಪ್ಪ, ಮಾಣಿಕ್, ವಜೀರ್ ಪಟೇಲ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.