
ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ–ಕುಂಚಾವರಂ ಕ್ರಾಸ್ ನಡುವಿನ ರಾಷ್ಟ್ರೀಯ ಹೆದ್ದಾರಿ ಕೆಟ್ಟು ಹೋಗಿರುವುದು
ಚಿಂಚೋಳಿ: ಬಾಪುರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167ರಲ್ಲಿರುವ ಚಿಂಚೋಳಿಯಿಂದ ರಾಜ್ಯದ ಗಡಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಸಂಚಕಾರ ಬಂದಿದೆ.
ರಸ್ತೆ ಹಾಳಾಗಿದ್ದರಿಂದ ಜನರು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಚಿಂಚೋಳಿ–ಕಲ್ಲೂರು ಮಾರ್ಗವಾಗಿ ಮಿರಿಯಾಣ ಗಡಿವರೆಗಿನ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದ ಜನ ಹೈರಾಣಾಗಿದ್ದಾರೆ.
ರಸ್ತೆಯ ಡಾಂಬರು ಕಿತ್ತು ಹೋಗಿದ್ದು, ದ್ವಿಚಕ್ರ ವಾಹನಗಳು ಮಗುಚಿ ಬೀಳುವಂತಾಗಿದೆ. ಅದರಲ್ಲಿ ಚಿಂಚೋಳಿಯ ಬಸವೇಶ್ವರ ವೃತ್ತದಿಂದ ಕುಂಚಾವರಂ ಕ್ರಾಸ್ವರೆಗೆ ರಸ್ತೆ ಹದಗೆಟ್ಟಿದೆ. ಮಿರಿಯಾಣದಿಂದ ತೆಲಂಗಾಣದ ತಾಂಡೂರುವರೆಗಿನ ರಸ್ತೆ ಹಾಳಾಗಿದ್ದರಿಂದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ಅಂತಿಮ ಹಂತಕ್ಕೆ ಭೂಸ್ವಾಧೀನ: ರಾಯಚೂರು– ವನಮಾರಪಳ್ಳಿ ರಾಜ್ಯ ಹೆದ್ದಾರಿ 15 ಮತ್ತು ಮುರ್ಕಿ–ಹಂದರಕಿ ರಾಜ್ಯ ಹೆದ್ದಾರಿ 122 ಹಾಗೂ ಜಿಲ್ಲಾ ಮುಖ್ಯ ರಸ್ತೆ ಒಳಗೊಂಡು ಚಿಂಚೋಳಿಯಿಂದ ಮಿರಿಯಾಣ ಗಡಿವರೆಗೆ 15.8 ಕಿ.ಮೀ ರಸ್ತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಬೇಕಿದೆ. ಸುಮಾರು 9 ಕಿ.ಮೀ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಅಂತಿಮ ಹಂತ ತಲುಪಿದೆ.
ಚಿಂಚೋಳಿ ಪಟ್ಟಣದಿಂದ ಚಂದಾಪುರ, ಪೋಲಕಪಳ್ಳಿ ಹೊರಗಿನಿಂದ 6 ಕಿ.ಮೀ. ಬೈಪಾಸ್ ರಸ್ತೆ ಮತ್ತು ಮಿರಿಯಾಣ ಕಲ್ಲೂರು ಮಧ್ಯದಿಂದ ಮಿರಿಯಾಣ ಹಳೆ ಚೆಕ್ ಪೋಸ್ಟ್ವರೆಗೆ 3 ಕಿ.ಮೀ. ಬೈಪಾಸ್ ರಸ್ತೆ ನಿರ್ಮಿಸಲು ಒಟ್ಟು ₹400 ಕೋಟಿ ಅನುದಾನವನ್ನು ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಜೂರು ಮಾಡಿದ್ದಾರೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ ತಿಳಿಸಿದ್ದಾರೆ.
ಚಿಂಚೋಳಿ ಎಥೆನಾಲ್ ಘಟಕ, ಚೆಟ್ಟಿನಾಡ ಸಿಮೆಂಟ್, ಕಲಬುರಗಿ ಸಿಮೆಂಟ್, ಮಲ್ಕಾಪುರ, ಬೆಲಕಟೂರು ಬಳಿಯ ಸಿಮೆಂಟ್ ಕಂಪನಿಗಳು ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ವ್ಯಾಪಾರ ವಹಿವಾಟಿನ ಜತೆಗೆ ಆರ್ಥಿಕಾಭಿವೃದ್ಧಿ ಚಟುವಟಿಕೆಗಳು ವೃದ್ಧಿಸಲು ನೆರವಾಗುವ ಉದ್ದೇಶದಿಂದ ರಸ್ತೆ ನಿರ್ಮಿಸಲಾಗುತ್ತಿದೆ. ಭೂಸ್ವಾಧೀನದ ಜಮೀನಿಗೆ ಪರಿಹಾರ ವಿತರಣೆ ಜತೆಗೆ ರಸ್ತೆ ನಿರ್ಮಾಣಕ್ಕೆ ₹ 400 ಕೋಟಿ ವೆಚ್ಚ ತಗುಲುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು 3/4 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಲಾಗುತ್ತಿದೆ. ಅಲ್ಲಿವರೆಗೆ ಈಗಿರುವ ರಸ್ತೆಗೆ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹುಮನಾಬಾದ್ ಉಪ ವಿಭಾಗದ ಸಹಾಯ ಕಾರ್ಯಪಾಲಕ ಎಂಜಿನಿಯರ್ ಇಂದೂಧರ ಮಂಗಲಗಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 167ರ ಗುಂಡಿ ಮುಚ್ಚುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಏಜೆನ್ಸಿ ಅಂತಿಮಗೊಂಡ ನಂತರ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದುಇಂದುಧರ ಮಂಗಲಗಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಹುಮನಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.