ಚಿತ್ತಾಪುರ: ಕಳೆದ ಒಂದು ವಾರದಿಂದ ಸತತವಾಗಿ ಮಳೆ ಬರುತ್ತಿದ್ದರಿಂದ ಹೊಲಗಳ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಮುಂಗಾರು ಹಂಗಾಮಿನ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ದೀರ್ಘಾವಧಿಯ ರೈತರ ವಾಣಿಜ್ಯ ಬೆಳೆ ತೊಗರಿ ಬೆಳೆಯು ಹಾನಿಯಾಗಿದೆ.
ಮಳೆಯಾಶ್ರಿತ 59,650 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಉದ್ದು 7,250, ಹೆಸರು 10,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಹೆಸರು ಬೆಳೆಯ ರಾಶಿ ನಡೆಯುತ್ತಿದ್ದು ಮುಂಗಡ ಬಿತ್ತನೆ ಮಾಡಿದ ರೈತರು ಮಳೆ ಬರುವ ಮುಂಚೆಯೇ ಹೆಸರು ರಾಶಿ ಮಾಡಿಕೊಂಡಿದ್ದಾರೆ. ಸ್ವಲ್ಪ ತಡವಾಗಿ ಬಿತ್ತನೆ ಮಾಡಿದ ಹೆಸರು ಬೆಳೆ ಕಟಾವಿಗೆ ಬಂದಿದೆ. ರಾಶಿ ಮಾಡುವ ಸಿದ್ಧತೆಯಲ್ಲಿದ್ದರೂ ಮಳೆ ರಾಶಿ ಮಾಡಲು ಬಿಡುತ್ತಿಲ್ಲ. ಹೆಸರು ಬೆಳೆಗಳ ಹೊಲದಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ರಾಶಿ ಯಂತ್ರಗಳು ಹೊಲದಲ್ಲಿ ಹೋಗುವ ಸ್ಥಿತಿ ಇಲ್ಲ.
ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಉದ್ದು ಬೆಳೆಯೂ ಹಾನಿಯಾಗುತ್ತಿದೆ. ಆರಂಭದ ಮಳೆಗೆ ಚೇತರಿಸಿಕೊಂಡು ಹೂವಾಡುತ್ತಿದ್ದ ಬೆಳೆ ಸಮೃದ್ಧವಾಗಿ ಬೆಳೆದಿದ್ದು ಈಗ ಕಾಯಿಯಾಗಿದೆ. ಮಳೆ ನೀರು ನಿಂತಿರುವ ಹೊಲಗಳಲ್ಲಿನ ಬೆಳೆ ಸಂಪೂರ್ಣ ಕೊಳೆತಿದೆ.
ಭಾನುವಾರ ಮತ್ತು ಸೋಮವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಹೆಸರು, ಉದ್ದು ಹಾಗೂ ರೈತರ ವಾಣಿಜ್ಯ ಬೆಳೆಯಾದ ತೊಗರಿ ಬೆಳೆ ಮತ್ತಷ್ಟು ಹಾನಿಯಾಗುವ ಆತಂಕ ರೈತರಲ್ಲಿ ಶುರುವಾಗಿದೆ.
‘ರೈತರು ಮಳೆಯ ಕುರಿತು ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು. ಬಸಿಗಾಲುವೆ ಮಾಡಿ ನೀರು ಹರಿದು ಹೋಗುವಂತೆ ಮಾಡಬೇಕು. ಆಗ ಬೆಳೆ ಹಾನಿ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 19 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಈ ಪೈಕಿ ಯಾರ ಹೊಲಗಳಲ್ಲಿ ಬೆಳೆ ಹಾನಿಯಾಗಿದೆಯೋ ಅಂತಹವರು ಟೊಲ್ ಫ್ರೀ 8001035490 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಅವರು ಹೇಳಿದ್ದಾರೆ.
ಬಸಿಗಾಲುವೆ ಮೂಲಕ ಮಳೆ ನೀರು ಹೊರ ಹೋದ ತಕ್ಷಣ ನೈಂಟಿನಾಲ್ ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಸಿಂಪರಣೆ ಮಾಡಿ ಬೆಳೆ ಹಾನಿ ತಪ್ಪಿಸಬಹುದು
-ಸಂಜೀವಕುಮಾರ ಮಾನಕರ್ ಸಹಾಯಕ ನಿರ್ದೇಶಕ ಕೃಷಿ ಇಲಾಖೆ
ರಾಶಿ ಶುರುವಾದ ಸಮಯದಲ್ಲಿ ಬರುತ್ತಿರುವ ಮಳೆಯಿಂದ ಹೆಸರು ಉದ್ದು ತೊಗರಿ ಬೆಳೆಗೆ ಹಾನಿಯಾಗಾಗುತ್ತಿದೆ. ಮಳೆಯಿಂದ ರಾಶಿಗೆ ಅಡಚಣೆಯಾಗಿದೆ
- ದೇವಿಂದ್ರ ಎಂ. ಅರಣಕಲ್ ರೈತ ಭಾಗೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.