
ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನ.2ರಂದು ಆರ್ಎಸ್ಎಸ್ ಪಥಸಂಚಲನ ನಡೆಸಲು ಅನುಮತಿ ನೀಡಬೇಕು ಎಂದು ಕೋಮರಾಮ್ ಭೀಮ್ ಗೊಂಡ–ಕುರುಬ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಒತ್ತಾಯಿಸಿದರು.
‘ಆರ್ಎಸ್ಎಸ್ ಪಥಸಂಚಲನಕ್ಕೆ ನಮ್ಮ ಸಂಘ ಬೆಂಬಲಿಸುತ್ತದೆ ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸುತ್ತೇವೆ ಎಂದು ಅ.23ರಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದೇವೆ. ಆರ್ಎಸ್ಎಸ್ ರಾಷ್ಟ್ರಭಕ್ತಿಯ ಸಂಘಟನೆಯಾಗಿದ್ದು, ದೇಶದ ಯುವಕರಲ್ಲಿ ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಪಥಸಂಚಲನ ಹಮ್ಮಿಕೊಂಡಿದೆ. ಇದಕ್ಕೆ ಅನುಮತಿ ನೀಡುವಂತೆ ವಿನಂತಿಸಲಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕುರುಬ ಸಮಾಜವನ್ನು ಎಸ್.ಟಿ ಸೇರ್ಪಡೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ಚಿತ್ತಾಪುರದಲ್ಲಿ ನ.2ರಂದೇ ಬೃಹತ್ ಪ್ರತಿಭಟನೆ ನಡೆಸಲು ಗೊಂಡ ಕುರುಬ ಎಸ್ಟಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಇದು ಕಾಂಗ್ರೆಸ್ ಪಕ್ಷದ ಪ್ರಾಯೋಜಿತ ಎಂದು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ. ಆರ್ಎಸ್ಎಸ್ ಪಥಸಂಚಲನ ದಿನವೇ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದು ಏಕೆ? ಪ್ರತಿಭಟನೆ ಮಾಡುವುದಾದರೆ ಜಿಲ್ಲಾ ಕೇಂದ್ರದಲ್ಲಿ ಮಾಡಲಿ. ಕಾಂಗ್ರೆಸ್ ಕೈಗೊಂಬೆಯಾಗಿ ಸಮಾಜವನ್ನು ಬಲಿಪಶು ಮಾಡಬಾರದು. ಸಮಾಜಕ್ಕಾಗಿಯೇ ಪ್ರತಿಭಟನೆ ಹಮ್ಮಿಕೊಳ್ಳುವುದಿದ್ದರೆ ನಾವೂ ಪಾಲ್ಗೊಳ್ಳುತ್ತೇವೆ’ ಎಂದರು.
‘ನನ್ನ ಅಧ್ಯಕ್ಷತೆಯ ಓಂ ಪತ್ತಿನ ಸಹಕಾರ ಸಂಘ ನಿಯಮಿತ ಶಹಾಬಾದ್ ಇದರ ಅಡಿಯಲ್ಲಿ ಗೋಳಾ(ಕೆ)ದಲ್ಲಿ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿಯನ್ನು ಆಹಾರ ನಿರೀಕ್ಷಕರು ದೂರುಗಳ ಹೆಸರಿನಲ್ಲಿ ಕೇವಲ 10–11 ದಿನಗಳಲ್ಲಿ ಅಮಾನತು ಮಾಡಿದ್ದಾರೆ. ನಾನು ಬಿಜೆಪಿ, ಆರ್ಎಸ್ಎಸ್ ಮತ್ತು ಸಮಾಜದ ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ಸಹಿಸಲಾರದೆ ಕಾಂಗ್ರೆಸ್ ನಾಯಕರ ಅಣತಿಯಂತೆ ಅಧಿಕಾರಿಗಳು ಇಂಥ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಹೋರಾಟ ಹತ್ತಿಕ್ಕಲು ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಂತೆ ಬಿಜೆಪಿ ಕಾರ್ಯಕರ್ತ ಮಾಳಪ್ಪ ಪೂಜಾರಿ ಅವರಿಗೆ ಸೇರಿದ ತಾಲ್ಲೂಕು ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘ ಅಫಜಲಪುರ ಇದರ ಅಡಿಯಲ್ಲಿ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿ ಸಂ.58 ಹೂವಿನಹಳ್ಳಿ ಇದನ್ನು ಸಹ ಅಮಾನತ್ತಿನಲ್ಲಿ ಇಡಲಾಗಿದೆ. ಇಂಥ ಪ್ರಕರಣಗಳು ಜಿಲ್ಲೆಯಲ್ಲಿ ಬಹಳಷ್ಟು ನಡೆಯುತ್ತಿವೆ’ ಎಂದು ದೂರಿದರು.
ಸಂಘದ ಕಾರ್ಯದರ್ಶಿ ರಾಜಶೇಖರ ಮುಚಖೇಡ, ಶಿವಾಜಿ ಖಂಡೋಜಿ, ಉಲ್ಲಾಲಿಂಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.