ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ನಗರದ ಬ್ರಹ್ಮಪುರ ಠಾಣೆಯ ಪೊಲೀಸರು ಹೈದರಾಬಾದ್ನಲ್ಲಿ ಭಾನುವಾರ ರಾತ್ರಿ ಬಂಧಿಸಿದರು. ಬಳಿಕ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
‘ಸಾಯಲು ಸಿದ್ಧ, ಶೂಟ್ ಮಾಡಲು ಸಿದ್ಧ’ ಎಂಬ ಹೇಳಿಕೆ ನೀಡಿ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ ಒಡ್ಡಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ತಿಪ್ಪಣ್ಣಪ್ಪ ದೂರು ನೀಡಿದ್ದರು.
9 ಮಂದಿ ವಿರುದ್ಧ ಪ್ರಕರಣ: ಬಿಜೆಪಿ ಮುಖಂಡರಾದ ವಿಠಲ್ ವಾಲ್ಮೀಕಿ ನಾಯಕ, ಅರವಿಂದ ಚವಾಣ್, ಮಣಿಕಂಠ ರಾಠೋಡ ಸೇರಿ 9 ಮಂದಿ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ‘ಮುಂಜಾಗ್ರತಾ ಕ್ರಮದ ವರದಿ’ ಆಧರಿಸಿ ಪ್ರಕರಣ ದಾಖಲಾಗಿದೆ. ಮಣಿಕಂಠ ರಾಠೋಡ್, ಗೋಪಾಲ್ ರಾಠೋಡ್, ರಾಮದಾಸ್ ಚವಾಣ್, ಅಶ್ವಥ್ ರಾಠೋಡ್, ಬಾಲಾಜಿ ಬುರಬುರೆ, ಮಹೇಶ ಬಾಳಿ, ಶಂಭುಲಿಂಗ ಭಂಗಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 11ರಂದು ಶಾಸಕ ಪ್ರಿಯಾಂಕ್ ಖರ್ಗೆ ಚಿತ್ತಾಪುರಕ್ಕೆ ಬಂದಿದ್ದ ವೇಳೆ ವಿಠಲ್ ನಾಯಕ, ಅರವಿಂದ ಚವಾಣ್ ಹಾಗೂ ಮಣಿಕಂಠ ರಾಠೋಡ ಬಿಜೆಪಿಯ ನೂರಾರು ಕಾರ್ಯಕರ್ತರನ್ನು ಸೇರಿಸಿ ಪೊಲೀಸರಿಗೆ ಮತ್ತು ಪಕ್ಷದ ಅಧ್ಯಕ್ಷರಿಗೆ ಮಾಹಿತಿ ನೀಡದೇ ಪಟ್ಟಣದಲ್ಲಿ ‘ಬೂತ್ ಜೀತೆತೊ ಎಲೆಕ್ಷನ್ ಜೀತೇಂಗೆ’ ಬ್ಯಾನರ್ನಡಿ ಸಭೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.