ಚಿಂಚೋಳಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಂಘಟನೆಯೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರಜಾಸೌಧದ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿ ನಿಂದಿಸಿ ಅಸಂಸದೀಯ ಪದಗಳು ಬಳಸಿ ಸಚಿವರಿಗೆ ಅಪಮಾನ ಮಾಡಿದ್ದಾರೆ. ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಹೀಗಾಗಿ ಸಚಿವರಿಗೆ ವಿಶೇಷ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ರಾಷ್ಟ್ರ ರಕ್ಷಣೆ, ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆ ಹೆಸರಲ್ಲಿ ಗಣವೇಷ ಧರಿಸಿ ಕೈಯಲ್ಲಿ ಕೋಲು ಹಿಡಿದು ಪಥ ಸಂಚಲನ ನಡೆಸುವುದು ಬೈಠಕ ನೆಪದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಕೋಮುವಾದಿ ವಿಷ ಬೀಜ ಬಿತ್ತುವುದರಿಂದ ಸಚಿವರು ಆರ್ಎಸ್ಎಸ್ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೇ ಇದನ್ನು ಸಹಿಸದ ವ್ಯಕ್ತಿಯೊಬ್ಬರು ಸಚಿವರಿಗೆ ಬೆದರಿಕೆ ಹಾಕಿದ್ದು ಖಂಡನೀಯ. ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸಮಾಜದಲ್ಲಿ ಒಡಕು ಮೂಡಿಸುವ ಶಕ್ತಿಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರಕ್ಕೆ ಪುರಸಭೆ ಸದಸ್ಯ ಅನ್ವರ್ ಖತೀಬ್ ಅವರು ಹಾಲಿನ ಅಭಿಷೇಕ ನಡೆಸಿ ಜಯಘೋಷ ಕೂಗಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಹಿರಿಯ ಮುಖಂಡ ಬಾಬುರಾವ್ ಪಾಟೀಲ, ಪ್ರಭುಲಿಂಗ ಲೇವಡಿ, ನರಶಿಮ್ಲು ಕುಂಬಾರ, ಆರ್. ಗಣಪತರಾವ್, ಆನಂದ ಟೈಗರ್, ಪ್ರವೀಣ ಟಿಟಿ, ಲಕ್ಷ್ಮಿ ಮಂಜುನಾಥ ಕೊರವಿ, ಮಹಮದ್ ಹಾದಿ, ಅಬ್ದುಲ್ ಬಾಷೀತ್, ರಾಘವೇಂದ್ರ ಗುತ್ತೇದಾರ, ಸಂತೋಷ ಗುತ್ತೇದಾರ, ತುಕಾರಾಮ ಪವಾರ, ಅಬ್ದುಲ್ ಬಾಷೀತ್, ಮಹಮದ್ ಹಾದಿ, ರೇವಣಸಿದ್ದ ಅಣಕಲ್, ಜನಾರ್ದನ ಪಾಟೀಲ, ಖಲೀಲ್ ಪಟೇಲ್, ರಾಮಶೆಟ್ಟಿ ಪವಾರ, ಮಲ್ಲಿಕಾರ್ಜುನ ಭೂಶೆಟ್ಟಿ, ಅನ್ವರ್ ಖತೀಬ್ ಮುಂತಾದವರಿದ್ದರು. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.