
ಕಲಬುರಗಿ: ‘ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ಗೆ ಗೌರವ ಇಲ್ಲದಂತಾಗಿದೆ. ಸಿದ್ದರಾಮಯ್ಯನ ಮಗನೇ ಹೈಕಮಾಂಡ್ನಂತೆ ವರ್ತಿಸುತ್ತಿದ್ದಾನೆ. ಎಂತಹ ಅಯೋಗ್ಯನಿಗೆ ಅಧಿಕಾರ ಕೊಟ್ಟಿದ್ದೀವಿ ಎಂದು ನಾವು ಮಹಾತ್ಮ ಗಾಂಧಿ ಬಳಿ ಕುಳಿತು ಪಶ್ಚಾತ್ತಾಪಪಟ್ಟುಕೊಳ್ಳಬೇಕಾಗಿದೆ’ ಎಂದು ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು 40 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದವನು. ಇದೇ ಮಹಾಶಯ ಹಿಂದೊಮ್ಮೆ, ನಮ್ಮಪ್ಪ ಮಹಾರಾಜರಿಗಿಂತಲೂ ಹೆಚ್ಚು ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಾನೆ. ಎಲ್ಲಿಯಾದರೂ ಸಾಧ್ಯವೇ? ಮಹಾರಾಜರು ಎಲ್ಲಿ, ಈತ ಎಲ್ಲಿ? ಇದು ರಾಜ್ಯದ ಜನರ ದುರದೃಷ್ಟವಾಗಿದೆ. ಜನಾದೇಶ ಪಡೆದ ಸರ್ಕಾರ ಜನಹಿತ ಮರೆತರೆ ಉಳಿಯುವುದಿಲ್ಲ. ಅಂತಹ ಸರ್ಕಾರಕ್ಕೆ ಗೌರವ, ಮಾನ, ಮರ್ಯಾದೆ ಇರುವುದಿಲ್ಲ. ಸಿದ್ದರಾಮಯ್ಯ ಸರ್ಕಾರ ಈಗ ಅಂತಹ ಪರಿಸ್ಥಿತಿಯಲ್ಲಿದೆ’ ಎಂದು ಹಳಿದರು.
‘ಬಡವರ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದ ಮೇಲೆ ಬಡವರಿಗಾಗಿ ಇದ್ದ ಯಶಸ್ವಿನಿ ಯೋಜನೆ ನಿಲ್ಲಿಸಿದ್ದಾರೆ. ಸರ್ಕಾರಗಳು, ನಾಡಿನಲ್ಲಿ ಅಕ್ಷರ ಮತ್ತು ಆರೋಗ್ಯದ ಗಮನ ಹರಿಸಲಿಲ್ಲ ಎಂದರೆ ಅದು ಸರ್ಕಾರವೂ ಅಲ್ಲ, ನಾಡೂ ಆಗಿರುವುದಿಲ್ಲ. ಅಕ್ಷರ, ಆರೋಗ್ಯವಿದ್ದರೆ ಅನ್ನ ಹುಟ್ಟುತ್ತದೆ. ಸದ್ಯ ರಾಜ್ಯದಲ್ಲಿ ಎರಡೂ ಇಲ್ಲ. ನನಗಷ್ಟೇ ಅಲ್ಲ, ಇಡೀ ರಾಜ್ಯದ ಜನರಿಗೆ ಸಿದ್ದರಾಮಯ್ಯ ಸರ್ಕಾರದ ಆಡಳಿತದ ಬಗ್ಗೆ ಸಂತೃಪ್ತಿ ಇಲ್ಲ. ಸರ್ಕಾರದವರು ಬರೀ ಬೊಗಳೆ ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ರಾಮಯ್ಯ ಹೇಳಿದ ಸುಳ್ಳುಗಳನ್ನು ಮಂತ್ರಿಗಳು, ಶಾಸಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಇಂತಹ ಅಯೋಗ್ಯ ಸರ್ಕಾರ ಹಾಗೂ ಮಂತ್ರಿಗಳನ್ನು ಹಿಂದೆಂದೂ ಕರ್ನಾಟಕದ ಜನರು ಕಂಡಿರಲಿಲ್ಲ’ ಎಂದು ಹೇಳಿದರು.
‘ಕಾಂಗ್ರೆಸ್ ಹೈಕಮಾಂಡ್ ಬಲಹೀನವಾಗಿದೆ. ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಬಿಟ್ಟರೆ ಕಾಂಗ್ರೆಸ್ಗೆ ಏನಾಗಿ ಬಿಡುತ್ತದೋ ಎಂಬ ಭಯ ಇದ್ದಂತಿದೆ. ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗುವುದಿಲ್ಲ. ಏನಾದರೂ ಹಾನಿಯಾದರೆ ಅಪ್ಪ–ಮಗನಿಗೆ ಆಗುತ್ತದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಅಗತ್ಯವಿದೆ. ಇದೇ ಸಿದ್ದರಾಮಯ್ಯ ಅಧಿಕಾರಕ್ಕೇರುವಾಗ 30–30 ತಿಂಗಳು ಎಂಬ ಒಪ್ಪಂದಾವಾಗಿದೆ. ಅದರಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರಗೆ ಅಧಿಕಾರ ಬಿಟ್ಟುಕೊಡಬೇಕು. ಡಿಕೆಶಿ ಪಕ್ಷದಲ್ಲಿಲ್ಲವೇ?, ಪಕ್ಷಕ್ಕಾಗಿ ಹಣ ಖರ್ಚು ಮಾಡಿಲ್ಲವೇ?. ನಿಜವಾಗಿಯೂ ಪಕ್ಷ ಕಟ್ಟಿರೋದು ಡಿ.ಕೆ.ಶಿವಕುಮಾರ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.