ಕಲಬುರ್ಗಿ: ಮಹಾರಾಷ್ಟ್ರದಿಂದ ವಾಪಸಾಗಿ ಕ್ವಾರಂಟೈನ್ ಅಲ್ಲಿ ಇದ್ದ ವ್ಯಕ್ತಿಯೊಬ್ಬರು ಚಿಕನ್, ಮೀನು ಹಾಗೂ ಅವರ ಮಕ್ಕಳಿಗೆ ಚಿಪ್ಸ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಬುಧವಾರ ಸಂಜೆ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಆಶಾ ಕಾರ್ಯಕರ್ತೆಯ ಕೈಗೆ ಬಲವಾದ ಏಟಾಗಿದ್ದು, ಈ ಸಂಬಂಧ ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಆಳಂದ ತಾಲ್ಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ಕ್ವಾರಂಟೈನ್ನಲ್ಲಿರುವ ಸೋಮನಾಥ ಸೋನಕಾಂಬಳೆ ಎಂಬಾತನೇ ಆಶಾ ಕಾರ್ಯಕರ್ತೆ ರೇಣುಕಾ ನಾಗಪ್ಪ ಕುಡುಕೆ ಅವರ ಮೇಲೆ ಹಲ್ಲೆ ಮಾಡಿದ ಆರೋಪಿ.
ಮುಂಬೈನಿಂದ ಬಂದಿದ್ದ ಸೋಮನಾಥನನ್ನು ಆಶಾ ಕಾರ್ಯಕರ್ತೆ ನೀಡಿದ ಮಾಹಿತಿ ಮೇರೆಗೆ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿತ್ತು. ಆಶಾ ಕಾರ್ಯಕರ್ತೆಯನ್ನು ಕರೆದ ಸೋಮನಾಥ, ‘ಊಟಕ್ಕೆ ಚಿಕನ್, ಮೀನು ತರಿಸಿಕೊಡಬೇಕು. ಮಕ್ಕಳಿಗೆ ಚಿಪ್ಸ್ ಕೊಡಿಸಬೇಕು’ ಎಂದು ಕೇಳಿದ್ದಾನೆ. ‘ಇವುಗಳನ್ನು ಪೂರೈಸುವ ಅಧಿಕಾರ ನನಗಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದ್ದಕ್ಕೆ ಸಿಟ್ಟಾದ ಸೋಮನಾಥ ಏಕಾಏಕಿ ಕೈ ತಿರುವಿ ಹಲ್ಲೆ ಮಾಡಿದ್ದಾನೆ. ಸೋಮನಾಥ ಪತ್ನಿ ಸುಧಾರಾಣಿ, ಸಂಬಂಧಿಗಳಾದ ಸುಶೀಲಾಬಾಯಿ, ಲಕ್ಷ್ಮಣ ಅವರೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರೇಣುಕಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕ್ವಾರಂಟೈನ್ನಲ್ಲಿದ್ದವರು ಸಿಬ್ಬಂದಿಯೊಂದಿಗೆ ಜಗಳ ಮಾಡುವ ಪ್ರಕರಣಗಳ ಪೈಕಿ ಇದು ಎರಡನೇಯದು. ಇತ್ತೀಚೆಗೆ ಕಾಳಗಿ ತಾಲ್ಲೂಕಿನ ಕೋರವಾರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಕೆಲವರು ಉಪಾಹಾರದಲ್ಲಿ ಹಲ್ಲಿ ಬಿದ್ದಿದೆ ಎಂಬ ಕಾರಣಕ್ಕೆ ಕಟ್ಟಿಗೆಯಿಂದ ಪಿಡಿಒ ಹಾಗೂ ಅಡುಗೆ ಸಿಬ್ಬಂದಿಯನ್ನು ಥಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.