ADVERTISEMENT

ಮಾದಕ ವಸ್ತು ಮಾರಾಟ: ಎಂಟು ಮಂದಿಗೆ ಕಠಿಣ ಜೈಲು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 8:29 IST
Last Updated 1 ಸೆಪ್ಟೆಂಬರ್ 2020, 8:29 IST

ಕಲಬುರ್ಗಿ:ಮಾದಕ ವಸ್ತು ತಂದು ನಗರದಲ್ಲಿ ಮಾರಾಟ ಮಾಡಿದ ಎಂಟು ಜನರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿದೆ.

‌ಇರ್ಫಾನ್ ಉಸ್ಮಾನ್‌ ಪಟೇಲ್, ಗಣೇಶ ಶರಣಪ್ಪ, ರಾಜಶೇಖರ ಸಿದ್ದಣ್ಣ, ಶಿವಕುಮಾರ ಪಡಶೆಟ್ಟಿ, ಶ್ರೀನಿವಾಸ ದೇವೇಂದ್ರಪ್ಪ, ಮೆಹಬೂಬ ಖಾಜಾಮಿಯಾ, ರಾಚಯ್ಯ ಅಲಿಯಾಸ್ ಬಸ್ಸಯ್ಯ ಮೊಘಲಯ್ಯ, ಜಯತೀರ್ಥ ಅಲಿಯಾಸ್ ಜಯಪ್ರಕಾಶ ಶಿಕ್ಷೆಗೆ ಗುರಿಯಾದವರು.

ಇರ್ಫಾನ್ ಹಾಗೂ ಇತರರು ನಗರದ ಆಳಂದ ರಸ್ತೆಯಲ್ಲಿರುವ ರಾಣಿ ಷಫೀರ್ ದರ್ಗಾ ಹತ್ತಿರದ ಆಲದ ಮರದ ಕಟ್ಟೆಯ ಮೇಲೆ ಕುಳಿತುಕೊಂಡು ಮಾದಕ ಪದಾರ್ಥವಾಗಿರುವ ಮೆಥಾಪೆಟಾಮಿನ್ 2013ರ ಡಿಸೆಂಬರ್‌ 1ರಂದು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿ 3 ಕೆ.ಜಿ ತೂಕದ ಮಾದಕ ದ್ರವ್ಯ ಜಪ್ತಿ ಮಾಡಿಕೊಂಡಿದ್ದರು.

ADVERTISEMENT

ಆಗ ‌ಹೆಚ್ಚುವರಿ ಎಸ್ಪಿ ಆಗಿದ್ದ ಸಂತೋಷ ಬಾಬು ಅವರ ವರದಿಯಂತೆ ಪಿಎಸ್‍ಐ ಹುಸೇನಬಾಷಾ, ಎಎಸ್‍ಐ ಭಗತಸಿಂಗ್ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

‌ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನ್ಯಾಯಾಧೀಶರಾದ ಆರ್.ಜೆ.ಸತೀಶಸಿಂಗ್ ಅವರು ಸಾಕ್ಷಿಗಳನ್ನು, ವಾದ ಪ್ರತಿವಾದ ಆಲಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕರಾದ ಅಂಜನಾ ಚವ್ಹಾಣ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.