ADVERTISEMENT

ಬಾಕಿ ವಿಮೆ ಹಣ 10 ದಿನಗಳಲ್ಲಿ ರೈತರ ಖಾತೆಗೆ: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:02 IST
Last Updated 11 ಸೆಪ್ಟೆಂಬರ್ 2025, 5:02 IST
<div class="paragraphs"><p>ಸಚಿವ ಪ್ರಿಯಾಂಕ್‌ ಖರ್ಗೆ</p></div>

ಸಚಿವ ಪ್ರಿಯಾಂಕ್‌ ಖರ್ಗೆ

   

ಕಲಬುರಗಿ: ‘2024–25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಾಕಿ ಪರಿಹಾರ ₹291.92 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, 10 ದಿನಗಳಲ್ಲಿ ಜಿಲ್ಲೆಯ ರೈತರ ಖಾತೆಗೆ ಜಮೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘2024–25ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು ₹656.62 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿತ್ತು. ಇಷ್ಟು ದೊಡ್ಡ ಮೊತ್ತ ಬಿಡುಗಡೆಯಾಗಿದ್ದು ಐತಿಹಾಸದಲ್ಲೇ ಮೊದಲ ಸಲ. ಅದರಲ್ಲಿ ಮೊದಲ ಕಂತಿನಲ್ಲಿ ₹364.70 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಬಾಕಿ ಉಳಿದಿದ್ದ ₹291.92 ಕೋಟಿ ಪರಿಹಾರ ಮಂಜೂರಾತಿಗೆ ತಾಂತ್ರಿಕ ತೊಡಕು ಎದುರಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆ ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಡಳಿತ ಸಮರ್ಪಕ ಉತ್ತರ ನೀಡಿದೆ. ನಾವೂ ಈ ಬಗೆಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದೆವು. ಇದೀಗ ಬಾಕಿ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿದ್ದು, ಮುಂದಿನ‌ ವಾರ ಬೆಳೆವಿಮೆ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ’ ಎಂದರು.

ADVERTISEMENT

‘ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿಯಲ್ಲಿ 1.05 ಲಕ್ಷ ಹೆಕ್ಟೇರ್‌ ಹಾನಿ ಅಂದಾಜಿಸಲಾಗಿದೆ. ಈ ಸಲವೂ 3 ಲಕ್ಷದಷ್ಟು ರೈತರು ಬೆಳೆವಿಮೆ ಪಡೆದಿದ್ದಾರೆ. ಜಿಲ್ಲಾಡಳಿತ ಹೋಬಳಿಮಟ್ಟದಲ್ಲಿ ಮುಂದಿನ 10 ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ನಿಖರ ಹಾನಿಯನ್ನು ಲೆಕ್ಕಹಾಕಲಿದೆ. ಬಳಿಕ ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸಿ ಪರಿಹಾರ ಕೊಡಿಸಲು ಯತ್ನಿಸಲಾಗುವುದು’ ಎಂದರು.

ಡಾ.ಅಜಯ್‌ ಸಿಂಗ್‌

‘ಕಲ್ಯಾಣ ಉತ್ಸವಕ್ಕಾಗಿ ಸಿಎಂ ಕಲಬುರಗಿಗೆ’ ‘ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾಲ್ಗೊಳ್ಳುವರು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ಮುಖ್ಯಮಂತ್ರಿ ಅವರು ಸೆ.16ರಂದು ಸಂಜೆ 6 ಗಂಟೆ ಹೊತ್ತಿಗೆ ಕಲಬುರಗಿಗೆ ಬರುವರು. ಅಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅನೌಪಚಾರಿಕವಾಗಿ ಅಧಿಕಾರಿಗಳ ಸಭೆ ನಡೆಸುವ ಸಾಧ್ಯತೆಗಳಿವೆ’ ಎಂದರು. ‘ಸೆ.17ರಂದು ಬೆಳಿಗ್ಗೆ 8.40ರಿಂದ 8.50ರ ಅವಧಿಯಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿರುವ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಬೆಳಿಗ್ಗೆ 9ರಿಂದ ರಾಷ್ಟ್ರಧ್ವಜಾರೋಹಣ ಸೇರಿದಂತೆ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ’ ಎಂದರು. ‘ನಮ್ಮದು ನುಡಿದಂತೆ ನಡೆದ ಸರ್ಕಾರ. ಸಿದ್ದರಾಮಯ್ಯ ಸರ್ಕಾರ 2023–24ರಲ್ಲಿ ₹3 ಸಾವಿರ ಕೋಟಿ 2024–25ರಲ್ಲಿ ₹5 ಸಾವಿರ ಕೋಟಿ ಹಾಗೂ ಪ್ರಸಕ್ತ 2025–26ರಲ್ಲಿ ₹5 ಸಾವಿರ ಕೋಟಿ ಸೇರಿ ಒಟ್ಟು ₹13 ಸಾವಿರ ಕೋಟಿ ಅನುದಾನ ನೀಡಿದೆ. ಅದರಲ್ಲಿ ₹8 ಸಾವಿರ ಕೋಟಿ ಬಿಡುಗಡೆಯಾಗಿದ್ದು ಆ ಪೈಕಿ ಒಟ್ಟು ₹6224 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನ ಬಳಕೆಗೆ ಈ ಸಲ ಜುಲೈನಲ್ಲೇ ರಾಜ್ಯಪಾಲರ ಅನುಮೋದನೆ ಸಿಕ್ಕಿದ್ದು ಈ ವರ್ಷ ಕನಿಷ್ಠ ₹4 ಸಾವಿರ ಕೋಟಿ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು’ ಎಂದರು. ‘ಉತ್ಸವದಲ್ಲಿ ಈ ಬಾರಿಯು ಕಲ್ಯಾಣಕ್ಕೆ ವಿಶೇಷ ಕೊಡುಗೆ ಘೋಷಿಸುವಂತೆ ಸೆ.12ರಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.