ADVERTISEMENT

ಅಫಜಲಪುರ: ಮಳೆಗೆ ಬೆಳೆ ಹಾನಿ; ಬಾರದ ಪರಿಹಾರ

ಶಿವಾನಂದ ಹಸರಗುಂಡಗಿ
Published 5 ಅಕ್ಟೋಬರ್ 2021, 5:45 IST
Last Updated 5 ಅಕ್ಟೋಬರ್ 2021, 5:45 IST
ಅಫಜಲಪುರ ಹೋಬಳಿಯಲ್ಲಿ ವ್ಯಾಪಕ ಮಳೆಯಿಂದ ಒಣಗಿದ ತೊಗರಿ ಬೆಳೆ
ಅಫಜಲಪುರ ಹೋಬಳಿಯಲ್ಲಿ ವ್ಯಾಪಕ ಮಳೆಯಿಂದ ಒಣಗಿದ ತೊಗರಿ ಬೆಳೆ   

ಅಫಜಲಪುರ: ಕಳೆದ 2 ಎರಡು ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಎಡೆ ಬಿಡದೆ ಸುರಿದ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಯಾದ ತೊಗರಿ, ಸೂರ್ಯಕಾಂತಿ, ಹತ್ತಿ, ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಬೆಳೆ ಕಳೆದುಕೊಂಡ ಕೃಷಿಕರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಹಾನಿಗೀಡಾದ ಬೆಳೆಗಳ ಸಮೀಕ್ಷೆ ನಡೆಸಿ ಪರಿಹಾರ ಒದ ಗಿಸುವಂತೆ ಈಗಾಗಲೇ ರೈತ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾ ಯಿಸಿವೆ. ಈವರೆಗೂ ಬೆಳೆಗಳ ಸಮೀಕ್ಷೆ ನಡೆದಿಲ್ಲ. ಮುಂಗಾರು ಹಂಗಾ ಮಿನಲ್ಲಿ ಹಾಳಾದ ಬೆಳೆಗಳ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಆರಂಭಿಸಿದ್ದಾರೆ. ಸಮೀಕ್ಷೆಯ ಮುಂಗಾರು ಬೆಳೆಗಳ ದಾಖಲಾತಿ ಕೈತಪ್ಪಬಹುದು. ಇದರಿಂದ ರೈತಾಪಿ ವರ್ಗಕ್ಕೆ ಬಹುದೊಡ್ಡ ನಷ್ಟವಾಗಲಿದೆ. ಕೆಲವು ಕಡೆ ಹಿಂಗಾರು ಬಿತ್ತನೆಯೂ ವಿಳಂಬ ಆಗುತ್ತಿದ್ದು, ರೈತರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಮುಖಂಡರು ಹೇಳಿದರು.

ಮುಂಗಾರು ಹಂಗಾಮಿನಲ್ಲಿ 99,850 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 1,02,555 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಗ್ಗು ಪ್ರದೇಶದಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ ಬೆಳೆಗಳು ಅಧಿಕ ತೇವಾಂಶದಿಂದ ನಾಶವಾಗಿವೆ. 2021ರ ಜುಲೈವರೆಗೆ ಅಫಜಲಪುರ, ಅತನೂರ ಮತ್ತು ಕರಜಗಿ ಹೋಬಳಿಗಳಲ್ಲಿ 531 ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಈ ಬಳಿಕ 2 ತಿಂಗಳ ಅವಧಿಯಲ್ಲಿ ಮಳೆ ಹೆಚ್ಚಾಗಿದ್ದು, ಹಾನಿ ಪ್ರಮಾಣ ಏರಿಕೆಯಾಗಲಿದೆ. ಸರ್ಕಾರದಿಂದ ಆದೇಶ ಬಂದ ತಕ್ಷಣವೇ ಬೆಳೆ ಸಮೀಕ್ಷೆ ಮಾಡಲಾಗುತ್ತದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಸ್.ಗಡಗಿಮನಿ.

ADVERTISEMENT

’ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅತ್ಯಧಿಕ ಮಳೆಯಿಂದ ತೊಗರಿ ಮತ್ತು ಕಬ್ಬಿಗೆ ಸಾಕಷ್ಟು ಹಾನಿಯಾಗಿದೆ. ಬಾಳೆ ಗಿಡಗಳು ಸಹ ನೆಲಕ್ಕುರುಳಿವೆ. ತಾಲ್ಲೂಕು ಆಡಳಿತ ಈವರೆಗೂ ಸಮೀಕ್ಷೆ ಆರಂಭಿಸಿಲ್ಲ. ಜುಲೈ ತಿಂಗಳಲ್ಲಿ ಹಾಳಾದ ಬೆಳೆಗೂ ಸಮೀಕ್ಷೆ ಮಾಡಿಲ್ಲ. ರೈತರಿಗೆ ಕೃಷಿ ನಿರ್ವಹಣೆಗೆ ಕಷ್ಟವಾಗುತ್ತಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಪರಿಹಾರ ನೀಡಿದರೆ, ಹಿಂಗಾರು ಬಿತ್ತನೆಯ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರ ರೈತ ಮುಖಂಡ ಚಂದ್ರಶೇಖರ ಎನ್ ಕರಜಗಿ ಹಾಗೂ ಮಾಶಾಳ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಶಿವು ಪ್ಯಾಟಿ.

ಒಂದು ವಾರದಲ್ಲಿ ಮಳೆ ಬಿಡುವು ಕೊಟ್ಟರೆ ಹಿಂಗಾರು ಹಂಗಾಮಿನ ಬಿತ್ತನೆ ಆರಂಭವಾಗಲಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ಶೇ 75ರಷ್ಟು ರಿಯಾಯಿತಿ ದರದಲ್ಲಿ ವಿತರಿಸಬೇಕು ಎಂದು ರೈತ ಮುಖಂಡರಾದ ಸಿದ್ದರಾಮ ದಣ್ಣೂರ ಮನವಿ ಮಾಡಿದರು.

***

ಹಿಂಗಾರು ಬೆಳೆಗಳ ಬಿತ್ತನೆಗೆ ಅನುಕೂಲ ಮಾಡಿಕೊಡಲು ಕೂಡಲೇ ಬೆಳೆಗಳ ಸಮೀಕ್ಷೆ ಆರಂಭಿಸಿ ಪರಿಹಾರದ ಧನ ಒದಗಿಸಬೇಕು

-ವಿಜಯಕುಮಾರ ಪಾಟೀಲ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.