ಕಲಬುರ್ಗಿ: ‘ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಭಾನುವಾರ ದಲಿತರ ಮದುವೆ ಮೆರವಣಿಗೆಗೆ ಮೇಲ್ಜಾತಿಯವರು ಅಡ್ಡಿಪಡಿಸಿದ್ದು, ಬಡಿಗೆ, ರಾಡುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಹಾಪುರದಲ್ಲಿ ನಡೆದ ಗ್ರಾಮದ ಯುವಕ ಮಲ್ಲಿಕಾರ್ಜುನ ಮೇಲಕೇರಿ ಅವರ ಮದುವೆ ಮುಗಿಸಿಕೊಂಡು ಮದುಮಕ್ಕಳ ಮೆರವಣಿಗೆ ಮಾಡಿಕೊಂಡು ಮನೆಗೆ ಹೋಗುತ್ತಿರುವಾಗ ಮೇಲ್ಜಾತಿಯವರು ಗುಂಪು ಕಟ್ಟಿಕೊಂಡು, ‘ನಿಮ್ಮ ಮದುವೆ ಆಗುವುದೇ ಕಷ್ಟ. ಅಂಥದ್ದರಲ್ಲಿ ಮೆರವಣಿಗೆ ಮಾಡಿಕೊಂಡು ಹೋಗುತ್ತೀರಾ’ ಎಂದು ನಿಂದಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಹಲ್ಲೆಕೋರರ ಆಸ್ತಿ–ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ದಲಿತ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ. ಮದನಕರ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ಮುಡ್ಡಿ, ಶಿವಕುಮಾರ ಗೋಲಾ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಭಂಡಾರಿ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭು ಸಿಲ್ಡ್, ಉಪಾಧ್ಯಕ್ಷ ಶರಣು ಬೇಲೂರ, ಕಮಲಾಪುರ ಸರ್ಕಲ್ ಅಧ್ಯಕ್ಷ ರಾಜು ಲೇಂಗಟಿ, ಮುಖಂಡರಾದ ಮಲ್ಲಿಕಾರ್ಜುನ ನಾಗೂರ, ನಾಗೇಂದ್ರಪ್ಪ ಬೇಲೂರ, ಷಣ್ಮುಖ ತೆಲ್ಲೂರ, ವಿಠ್ಠಲ ಬಾಚನಾಳ, ರಾಣೇಶ ಕಂಬಾ, ನಾಗರಾಜ ಹೆಬ್ಬಾಳ, ರಮೇಶ ಮೀಶಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.