ಕಲಬುರ್ಗಿ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಅಕ್ಕನಾಗಮ್ಮ ದಯಾಮಣಿ (50) ಅವರು ಹೈದರಾಬಾದ್ ಗೆ ಕೊಂಡೊಯ್ಯುವ ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆ ಸಾವಿಗೀಡಾಗಿದ್ದಾರೆ.
ರಾತ್ರಿ 2 ಗಂಟೆ ಸುಮಾರಿಗೆ ಅಕ್ಕನಾಗಮ್ಮ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಅವರನ್ನು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ಕರೆತಂದರೂ ದಾಖಲಿಸಿಕೊಳ್ಳಲಿಲ್ಲ. ನಂತರ ಇಎಸ್ಐಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ವೆಂಟಿಲೇಟರ್ ಇಲ್ಲ ಎಂಬ ನೆಪ ಹೇಳಿ ವೈದ್ಯರು ಚಿಕಿತ್ಸೆಗೆ ನಿರಾಕರಿಸಿದರು. ನಂತರ ನಗರದ ಎರಡು ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರೆ ಅಲ್ಲಿಯೂ ದಾಖಲಿಸಿಕೊಳ್ಳಲಿಲ್ಲ. ನಂತರ ಆಂಬುಲೆನ್ಸ್ ಮೂಲಕ ಹೈದರಾಬಾದ್ ಗೆ ಕೊಂಡೊಯ್ಯುವ ಹಾದಿಯಲ್ಲಿ ಜಹೀರಾಬಾದ್ ಬಳಿ ಕೊನೆಯುಸಿರೆಳೆದರು ಎಂದು ಅಕ್ಕನಾಗಮ್ಮ ಅವರ ಪತಿ ಛತ್ರಪತಿ ಆರೋಪಿಸಿದರು.
ಕೊರೊನಾ ಕಾರಣಕ್ಕಾಗಿ ಹಲವು ಆಸ್ಪತ್ರೆಗಳು ನಿರಾಕರಿಸುತ್ತಿವೆ. ಸರ್ಕಾರಿ ಆಸ್ಪತ್ರೆಯೇ ಅಂಗನವಾಡಿ ಕಾರ್ಯಕರ್ತೆಗೆ ಚಿಕಿತ್ಸೆ ನಿರಾಕರಿಸಿದೆ ಎಂದರೆ ಹೇಗೆ? ಜಿಲ್ಲಾಧಿಕಾರಿಗಳು ತಕ್ಷಣ ಆಸ್ಪತ್ರೆ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನಪಡೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.