ADVERTISEMENT

ದರ್ಗಾ ಪ್ರವೇಶ ದ್ವಾರದ ಎದುರು ತಡೆಗೋಡೆ ನಿರ್ಮಾಣ; ಸೌಹರ್ದ ಸಮಿತಿಯಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:41 IST
Last Updated 24 ಮೇ 2023, 7:41 IST
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಮಂಗಳವಾರ ಸೌಹಾರ್ದ ಸಮಿತಿ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಮಂಗಳವಾರ ಸೌಹಾರ್ದ ಸಮಿತಿ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು   

ಕಾಳಗಿ: ರಟಕಲ್ ಗ್ರಾಮದ ಮಹೆಬೂಬ್ ಸುಬಾನಿ ದರ್ಗಾ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಪೊಲೀಸ್ ಠಾಣೆಯ ತಡೆಗೋಡೆ ಕಟ್ಟಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೌಹಾರ್ದ ಸಮಿತಿಯ ಸದಸ್ಯರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.

ದರ್ಗಾ ಮೇಲೆ ಹಿಂದೂ ಮತ್ತು ಮುಸ್ಲಿಮರು ಪೂಜನೀಯ ನಂಬಿಕೆ ಇರಿಸಿಕೊಂಡು ಬರುತ್ತಿದ್ದಾರೆ. ಇಂತಹ ಧಾರ್ಮಿಕ ಸ್ಥಳದಲ್ಲಿ ತಡೆ ಗೋಡೆ ಕಟ್ಟಿರುವುದು ಸರಿಯಲ್ಲ. ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಧರಣಿ ನಿರತರು ಮನವಿ ಮಾಡಿದ್ದರು.

ಗ್ರಾಮದಲ್ಲಿ ಪೊಲೀಸ್‌ ಠಾಣೆ ತೆರೆಯುವ ಮುನ್ನವೇ ದರ್ಗಾ ಇತ್ತು. ಪೊಲೀಸ್ ಇಲಾಖೆಗೆ ಜಮೀನು ಮಾರಿದ್ದ ಅಬ್ದುಲ್ ಸಾಬ್ ಅವರ ತಂದೆ, ಯಾವುದೇ ಕಾರಣಕ್ಕೂ ದರ್ಗಾ ತೆರವುಗೊಳಿಸಬಾರದು ಎಂಬ ಷರತ್ತು ಹಾಕಿದ್ದರು. ಆದರೆ, ಈಗ ಗೋಡೆ ಕಟ್ಟಲಾಗಿದೆ ಎಂದು ದೂರಿದ್ದಾರೆ.

ADVERTISEMENT

‘ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಈಗಿರುವ ದರ್ಗಾದ ದಕ್ಷಿಣ ದಿಕ್ಕಿನಲ್ಲೇ ಹಾದಿ ಮಾಡಲಾಗಿದೆ. ಹಳೆಯ ಹಾದಿಗಿಂತ ಈಗಿನದ್ದು ಉತ್ತಮ ಹಾಗೂ ವಿಶಾಲವಾಗಿದೆ. ಪೊಲೀಸ್ ಇಲಾಖೆಗೆ ಷರತ್ತು ಬದ್ಧವಾಗಿ ಮಾರಾಟ ಮಾಡಿದ್ದು ಯಾವುದೇ ದಾಖಲೆ ಇಲ್ಲ. ಭಕ್ತರ ಓಡಾಟಕ್ಕೆ ಸಕಲ ವ್ಯವಸ್ಥೆ ಮಾಡಿ ತಡೆ ಗೋಡೆ ಕಟ್ಟಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಮುರುಗೆಣ್ಣಾ ಅಣಕಲ್, ರಸೂಲ್ ಸಾಬ್, ರೇವಣಸಿದ್ದಪ್ಪ, ಜೇಜಿ ಮುತ್ಯಾ, ಸಿದ್ದಪ್ಪ, ಮಕ್ಬುಲ್ ಸಾಬ ಗೌಂಡಿ, ಈರಣ್ಣ, ಮೊಹಮ್ಮದ್ ಮಿಯ್ಯಾ ಇಕ್ಬಾಲ್ ಪಟೇಲ್, ಶೌಕತ್ ಅಲಿ, ಸಲೀಮಾ ಬೇಗಂ, ಹಸೀನಾ, ಗೋರಿಮಾ, ಹುಸೇನ್ ಬೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.