
ಕಲಬುರಗಿ: ನಗರದ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನದ ವತಿಯಿಂದ ಜನವರಿ 1ರಂದು ಸಂಜೆ 5ಕ್ಕೆ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಹಾಗೂ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಎಚ್. ವೀರಭದ್ರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋರ್ಟ್ ಸಮೀಪದ ವಿಶ್ವೇಶ್ವರಯ್ಯ ಎಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ, ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್.ಗಂಗಾಧರ ಅವರಿಗೆ ಡಾ.ಪಿ.ಎಸ್.ಶಂಕರ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿ ಹಾಗೂ ಅಥಣಿಯ ಡಾ.ಅಣ್ಣಪ್ಪ ಪಾಂಗಿ ಅವರಿಗೆ ಡಾ.ಪಿ.ಎಸ್.ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಂದಾನವಾಜ್ ವಿಶ್ವವಿದ್ಯಾಲಯದ ಕುಲಪತಿ, ಕೆಬಿಎನ್ ದರ್ಗಾ ಮುಖ್ಯಸ್ಥ ಸೈಯದ್ ಮುಹಮದ್ ಅಲಿ ಅಲ್ ಹುಸೇನಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅತಿಥಿಯಾಗಿ ವಿಜಯಪುರದ ಬಿಎಲ್ ಡಿಇ ವಿಶ್ವವಿದ್ಯಾಲಯದ ಸಮ ಕುಲಪತಿ ಪ್ರೊ. ವೈ.ಎಂ. ಜಯರಾಜ್ ಆಗಮಿಸುವರು. ವಿಜ್ಞಾನ ಕ್ಯಾಲೆಂಡರನ್ನು ನಗರ ಪೋಲಿಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ. ಬಿಡುಗಡೆ ಮಾಡುವರು’ ಎಂದರು.
ವಿದ್ಯಾರ್ಥಿಗಳಾದ ಪಾಂಡುರಂಗ ಜಿ.ಪಿ., ನಂದನ್ ಗಣೇಶ್, ಆದಿತ್ಯ ಎಚ್.ಎಸ್., ಅಜಿತ್ ಸಿ.ಪಿ., ಪಲ್ಲವಿ ಬಿರಾದಾರ, ಅಮೋಘ ರೆಡ್ಡಿ, ಅಭಿಷೇಕ, ಪ್ರಜ್ವಲ ಸಮಗೊಂಡ, ಶಾಂಭವಿ ಅಂಬರ್, ಕಿರಣಕುಮಾರ್ ಅವರಿಗೆ ವೈದ್ಯ ವಿದ್ಯಾರ್ಥಿ ವೇತನ ನೀಡಲಾಗುವುದು. ನೇಹಾ ಎಸ್., ಭಾಗ್ಯಶ್ರೀ, ಚೇತನ್ ಅವರಿಗೆ ಎಂಜಿನಿಯರಿಂಗ್ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಹೇಳಿದರು.
ಡಾ. ಚಂದ್ರಪ್ಪ ರೇಶ್ಮಿ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ವಿಜ್ಞಾನ ಕ್ಯಾಲೆಂಡರ್ನ ಪ್ರತಿ ತಿಂಗಳ ಪುಟದಲ್ಲಿ ತಲಾ ಒಬ್ಬರಂತೆ ಹನ್ನೆರಡು ಮಹಿಳಾ ವಿಜ್ಞಾನಿಗಳ ಭಾವಚಿತ್ರ ಪ್ರಕಟಿಸಲಾಗಿದೆ. ಜೊತೆಗೆ ಆ ವಿಜ್ಞಾನಿಗಳ ಕೊಡುಗೆ ಕುರಿತು ಮುನ್ನುಡಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನರೇಂದ್ರ ಬಡಶೇಷಿ, ಡಾ. ಪಿ.ಎಂ. ಬಿರಾದಾರ, ಡಾ.ಎಸ್.ಎ. ಮಾಲಿಪಾಟೀಲ, ಸದಾನಂದ ಮಹಾಗಾಂವಕರ್, ಮಣಿಕಾಲ್ ಶಹಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.