ಕಲಬುರ್ಗಿ: ಕಾಯಿಲೆಯಿಂದ ಗುಣಮುಖವಾದ ಮೇಲೆ ಊರಿಗೆ ಹೋಗಲು ಹಣವಿಲ್ಲದೇ ಪರದಾಡುತ್ತಿದ್ದ ಕುಟುಂಬಕ್ಕೆ ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಅವರೇ ಟಿಕೆಟ್ ತೆಗೆಸಿ, ಊಟೋಪಚಾರಕ್ಕೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ಲಾಕ್ಡೌನ್ಗಿಂತ ಮುಂಚೆ ಕಲಬುರ್ಗಿಗೆ ಬಂದಿದ್ದ ಹೈದರಾಬಾದ್ನ 32 ವರ್ಷದ ಮಹಿಳೆ ವಾಪಸ್ ಊರಿಗೆ ಹೋಗಲಾಗದೇ ಇಲ್ಲೇ ಸಿಲುಕಿಕೊಂಡಿದ್ದರು. ಇಲ್ಲಿ ಸಂಬಂಧಿಕರಿದ್ದರೂ ಯಾರ ಮನೆಗೂ ಹೋಗಲಾರದೇ ಪರದಾಡಿದರು. ಈಚೆಗೆ ವಾಂತಿ– ಭೇದಿ, ಹೊಟ್ಟೆನೋವಿನಿಂದ ಜಿಮ್ಸ್ಗೆ ದಾಖಲಾಗಿದ್ದರು. ಕೆಲ ದಿನಗಳ ಬಳಿಕ ಅವರ 6 ವರ್ಷದ ಪುತ್ರ ಕೂಡ ಕಾಮಾಲೆಯಿಂದ ಬಳಲತೊಡಗಿದ. ಲಾಕ್ಡೌನ್ ತೆರವಾದ ನಂತರ ಮಹಿಳೆ ಪತಿ ಕೂಡ ಬಂದು ಆಸ್ಪತ್ರೆಯಲ್ಲಿ ಉಳಿದಿದ್ದರು.
ಎರಡು ತಿಂಗಳಿಂದ ಈ ಮಹಿಳೆ ಹಾಗೂ ಮಗುವಿಗೆ ಜಿಮ್ಸ್ನಲ್ಲೇ ಆಶ್ರಯ ನೀಡಲಾಗಿತ್ತು. ಜೂನ್ 26ರಂದು ಇಬ್ಬರೂ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾದರು. ಆದರೆ, ಹೈದರಾಬಾದ್ಗೆ ಹೋಗಲು ಹಣವಿಲ್ಲದ ಕಾರಣ ಇಡೀ ದಿನ ನಗರದಲ್ಲಿ ಹಣಕ್ಕಾಗಿ ಪರದಾಡಿದರು.
ವಿಷಯ ತಿಳಿದ ಡಾ.ರುದ್ರವಾಡಿ ಅವರು, 32 ವರ್ಷದ ಈ ಮಹಿಳೆ, ಅವರ ಪತಿ ಹಾಗೂ ಅವರು ಆರು ವರ್ಷದ ಮಗನಿಗೆ ರೈಲ್ವೆ ಟಿಕೆಟ್ ತೆಗೆಸಿಕೊಟ್ಟರು. ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ರೈಲು ನಿಲ್ದಾಣ ತಲುಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.