ADVERTISEMENT

‘ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ’

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:22 IST
Last Updated 30 ಜುಲೈ 2023, 15:22 IST
ಗಂಗಾವತಿ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಭಾನು ವಾರ ನಡೆದ ದೇವಾಂಗ ಸಮಾಜದ ಕಾರ್ಯಕ್ರಮದಲ್ಲಿ ಗಣ್ಯರು ದೇವಲ ದೇವಾಂಗ ಪುರಾಣಗ್ರಂಥ ಪುಸ್ತಕ ಬಿಡುಗಡೆ ಮಾಡಿದರು.
ಗಂಗಾವತಿ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಭಾನು ವಾರ ನಡೆದ ದೇವಾಂಗ ಸಮಾಜದ ಕಾರ್ಯಕ್ರಮದಲ್ಲಿ ಗಣ್ಯರು ದೇವಲ ದೇವಾಂಗ ಪುರಾಣಗ್ರಂಥ ಪುಸ್ತಕ ಬಿಡುಗಡೆ ಮಾಡಿದರು.   

ಗಂಗಾವತಿ: ಸಮಾಜದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉನ್ನತ ಗುರಿ ಸಾಧನೆಗೆ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಿಕೆಗೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ನಗರದ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ದೇವಾಂಗ ಸಮಾಜ, ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಡೆದ ದೇವಲ ದೇವಾಂಗ ಪುರಾಣಗ್ರಂಥ ಬಿಡುಗಡೆ, ಜಿಲ್ಲಾ ದೇವಾಂಗ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇವಾಂಗ ಸಮಾಜದ ಮಹರ್ಷಿಗಳು ದೇವಾನು-ದೇವತೆಗಳಿಗೆ ವಸ್ತ್ರ ನೇಯ್ದುಕೊಟ್ಟವರು. ಇಂತಹ ಸಮಾಜದಲ್ಲಿ ಜನಿಸಿದ ನೀವು ಸಂಘಟನಾತ್ಮಕವಾಗಿ ಸಮಾಜದ ಅಭಿವೃದ್ಧಿಗೆ, ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕೆ ಪ್ರತಿಭಾ ಪುರಸ್ಕಾರಗಳು ನೀಡುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ದೇವಾಂಗ ಸಮಾಜ ಏಳಿಗೆಗೆ ಶ್ರೀಗಳ ಪಾತ್ರ ದೊಡ್ಡದಿದ್ದು, ಇಂದಿನಿಂದ ದೇವಾಂಗ ಸಮಾಜದ ಕಷ್ಟ-ಸುಖದ ಜತೆಗೆ ಸಂಘದ ಪದಾಧಿಕಾರಿಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನುಲುಬಾಗಿ ನಿಲ್ಲುತ್ತೇ‌ನೆ ಎಂದು ದೇವಾಂಗ ಸಮಾಜಕ್ಕೆ ಭರವಸೆ ನೀಡಿದರು.

ದೇವಾಂಗ ಮಹಾಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದ ಏಳಿಗೆಗೆ ಒಗ್ಗಟ್ಟಿನ ಮಂತ್ರ ಪಠಿಸುವುದು ತುಂಬಾ ಮುಖ್ಯ. ನಮ್ಮ ವೈಯಕ್ತಿಕ ಜೀವನ ಜತೆಗೆ ಸಮಾಜದ ಏಳಿಗೆಗೆ ಶ್ರಮಿಸಬೇಕಾದದ್ದು, ಎಲ್ಲ ಜವಾಬ್ದಾರಿಯಾಗಿದೆ ಎಂದರು.

ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿ, ದೇವಾಂಗ ಸಮಾಜದ ಜನರು ಬದುಕಿನ ಉನ್ನತಮಟ್ಟಕ್ಕೆ ಏರುವ ವಿಷಯದಲ್ಲಿ ಇನ್ಮುಂದೆ ಜಾಗೃತರಾಗಬೇಕು. ಸಮಾಜದ ಗುರು-ಹಿರಿಯರನ್ನು ಗೌರವಿಸುವ ಜತೆಗೆ ಸಮಾಜವನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು ಎಂದು ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ದೇವಾಂಗ ಮಹಾಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಅವರು, ದೇವಲ ದೇವಾಂಗ ಸಮಾಜದ ಪುರಾಣಗ್ರಂಥ ಬಿಡುಗಡೆ ಮಾಡಿದರು. ನಂತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ದೇವಾಂಗಮಠದ ಶಂಕರಯ್ಯ ಸ್ವಾಮಿ, ರುದ್ರಮುಮುನಿ ಸ್ವಾಮಿ, ಲಲಿತಾ ಕುದುರೆಮುಖಿ, ಮಂಜುನಾಥ ವಸ್ತ್ರದ, ಎಸ್.ಆರ್. ಸಿದ್ಧಲಿಂಗ, ಪ್ರಹ್ಲಾದ ಗೌಡ, ವಾಸುದೇವ ಕೊಳಗದ, ಈರಣ್ಣ ಬೆಟಗೇರಿ, ವೆಂಕಟೇಶ, ಶಂಕ್ರಪ್ಪ ಪಂಪಣ್ಣ ಬೆಟಗೇರಿ, ರಾಮನಗೌಡ ಬಿಜ್ಜಳ, ಸುನಂದ, ಆನಂದ್ ಅಕ್ಕಿ ಸೇರಿ ಸಮಾಜದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.