ADVERTISEMENT

ಮತಕಳವು | ಪತ್ರ ಬರೆದವರು ಆಳಂದಕ್ಕೆ ಭೇಟಿ ನೀಡಲಿ: ಶಾಸಕ ಬಿ.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 23:54 IST
Last Updated 1 ಡಿಸೆಂಬರ್ 2025, 23:54 IST
ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ   

ಕಲಬುರಗಿ: ‘ಮತಕಳವು ಕುರಿತು ಚುನಾವಣಾ ಆಯೋಗದ ಮೇಲೆ ಆರೋಪ ಸರಿಯಲ್ಲ’ ಎಂದು ಪತ್ರ ಬರೆದ 272 ಜನ ಬುದ್ಧಿಜೀವಿಗಳು ಆಳಂದ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ನಿವೃತ್ತ ನ್ಯಾಯಮೂರ್ತಿ ಎಸ್.ಎನ್. ಧಿಂಗ್ರಾ, ನಿರ್ಮಲ್ ಕೌರ್ ಹಾಗೂ ಇತರ ಬುದ್ಧಿಜೀವಿಗಳು ಈಗ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ಖಂಡನೀಯ’ ಎಂದರು. 

‘ಆಳಂದ ಕ್ಷೇತ್ರದ ಮತಕಳವು ಆರೋಪ ಕುರಿತು ಎಸ್‌ಐಟಿ ತನಿಖೆ ಮಾಡುತ್ತಿದೆ. ಇದೇ ರೀತಿ ವಿವಿಧೆಡೆ ತನಿಖೆ ನಡೆದಿದೆ. ಈಗ ಪತ್ರ ಬರೆದಿರುವುದು ಏಕೆ? ತಮ್ಮ ಅಭಿಪ್ರಾಯ ಹೇಳುವುದಿದ್ದರೆ, ತನಿಖೆ ಮುಗಿದ ಬಳಿಕ ಹೇಳಲಿ’ ಎಂದು ಆಗ್ರಹಿಸಿದರು.

ADVERTISEMENT

ವ್ಯವಸ್ಥೆ ಮಾಡುವೆ: ‘ಪತ್ರ ಬರೆದವರು ಕ್ಷೇತ್ರಕ್ಕೆ ಭೇಟಿ ನೀಡಿದಲ್ಲಿ ಉಳಿಯಲು ಸಕಲ ವ್ಯವಸ್ಥೆ ಮಾಡುವೆ. ಕ್ಷೇತ್ರದಲ್ಲಿ ತಿರುಗಾಡಿ ತಂತ್ರ, ಪ್ರತಿತಂತ್ರಗಳ ಬಗ್ಗೆ ಖುದ್ದು ತಿಳಿಯಲಿ’ ಎಂದರು.

‘ಆಳಂದ ಕ್ಷೇತ್ರದಲ್ಲಿ ಮತಕಳವು ಆಗಿದೆ ಎಂದು ನಾನು ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಚುನಾವಣಾ ಅಧಿಕಾರಿ ಪ್ರಾಥಮಿಕ ತನಿಖೆ ನಡೆಸಿ, 5,994 ಮತಗಳು ಅಳಿಸಲು ಅರ್ಜಿ ನೀಡಿರುವುದು ತಿಳಿದು ಬಂದಿತ್ತು. ಅದಾದ ನಂತರ ಸ್ವತಃ ಚುನಾವಣಾ ಅಧಿಕಾರಿಯೇ ಆಳಂದ ಠಾಣೆಯಲಿ ದೂರು ನೀಡಿದ್ದಾರೆ. ನಾನು ಕೊಟ್ಟ ದೂರಿನಂತೆ ತನಿಖೆ ನಡೆಯುತ್ತಿಲ್ಲ’ ಎಂದು ಬಿ.ಆರ್‌.ಪಾಟೀಲ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.