
ಕಲಬುರಗಿ: ‘ದೇಶದಾದ್ಯಂತ ಇಎಸ್ಐಸಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ನಿಯಮಗಳನ್ನು ಸರಳೀಕರಿಸಿ ಅಗತ್ಯವಿರುವಷ್ಟು ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ತಿಳಿಸಿದರು.
ಇಎಸ್ಐಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಗರದಲ್ಲಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣ, ಸೌರ ವಿದ್ಯುತ್ ವ್ಯವಸ್ಥೆ ಹಾಗೂ ಅಂತರ್ಜಲ ಮರುಪೂರಣ ಸೌಲಭ್ಯಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಇಎಸ್ಐಸಿಗೆ ಬೇಕಿರುವ ವೈದ್ಯರ ನೇಮಕಾತಿ ಕುರಿತು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕೋರಲಾಗಿದೆ. ಅವರು ವರ್ಷದಲ್ಲಿ ಎರಡು ಬಾರಿ ನೇಮಕಾತಿ ನಡೆಸುತ್ತಿದ್ದಾರೆ’ ಎಂದರು.
‘ದೇಶದಲ್ಲಿರುವ ಇಎಸ್ಐಸಿ ಆಸ್ಪತ್ರೆಗಳಲ್ಲಿ ಸಂಘಟಿತ ಕಾರ್ಮಿಕರು ಅವರ ಅವಲಂಬಿತರ ಜೊತೆಗೆ ಇನ್ನು ಮುಂದೆ ಕೃಷಿ, ಗಿಗ್, ಗಾರ್ಮೆಂಟ್ಸ್ ಸೇರಿ ಅಸಂಘಟಿತ ಕಾರ್ಮಿಕ ವರ್ಗದವರಿಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸಾ ಸೇವೆಯು ಲಭ್ಯವಾಗಲಿದೆ’ ಎಂದೂ ಹೇಳಿದರು.
‘ಕಾರ್ಮಿಕರಿಗೆ ನೆರವಾಗಲು ದೇಶದಾದ್ಯಂತ 10 ವೈದ್ಯಕೀಯ ಕಾಲೇಜು ತೆರೆಯಲಾಗುತ್ತಿದೆ. ಹೃದ್ರೋಗ ವಿಭಾಗ, ಇಎಸ್ಐಸಿ ವೈದ್ಯಕೀಯ ಕಾಲೇಜಿನಲ್ಲೇ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.