ಕಲಬುರ್ಗಿ: ಉತ್ತರಪ್ರದೇಶದಲ್ಲಿ ರೈತರ ಸಾವಿಗೆ ಸರ್ಕಾರದ ಧೋರಣೆಯ ಕಾರಣ. ಇದರ ಹೊಣೆ ಹೊತ್ತು ಸಚಿವ ಅರ್ಜುನ್ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಸಂಯುಕ್ತ– ಹೋರಾಟ ಕರ್ನಾಟಕ ಕಲಬುರ್ಗಿ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹಿಂಸಾಚಾರದಲ್ಲಿ ನಾಲ್ವರು ರೈತರ ದಾರುಣ ಹತ್ಯೆಯಾಗಿದೆ. ಇದರಲ್ಲಿ ಸಚಿವರ ಪುತ್ರ ಹಾಗೂ ಸಂಬಂಧಿಕರ ಕೈವಾಡವಿದೆ. ಆದ್ದರಿಂದ ಪ್ರಧಾನಿ ಮೋದಿ ಅವರು ಸಚಿವ ಅರ್ಜುನ್ ಮಿಶ್ರಾ ಅವರ ರಾಜೀನಾಮೆ ಪಡೆಯಬೇಕು. ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮೃತ ರೈತರ ಕುಟುಂಬದವರಿಗೆ ತಲಾ ₹ 1 ಕೋಟಿ ಪರಿಹಾರ ನೀಡಬೇಕು. ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳ ತಿದ್ದುಪಡಿ ಹಿಂದಕ್ಕೆ ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ, ಎಸ್.ಆರ್. ಕೊಲ್ಲೂರ, ಭೀಮಶೆಟ್ಟಿ ಯಂಪಳ್ಳಿ, ನಾಗೇಂದ್ರಪ್ಪ ಥಂಬೆ, ಅರ್ಜುನ್ ಗೊಬ್ಬೂರ, ನಾಗಯ್ಯಸ್ವಾಮಿ, ಮೇಘರಾಜ ಕಠಾರೆ, ಜಗದೇವಿ ನೂಲಕರ, ಕೆ.ನೀಲಾ, ಪಾಂಡುರಂಗ ಮಾವಿನಕರ
ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.