ADVERTISEMENT

ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ

ಕಾಳಗಿ ಮಂಡಲ ಬಿಜೆಪಿ ರೈತ ಮೋರ್ಚಾ ಆಯೋಜನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:05 IST
Last Updated 18 ಫೆಬ್ರುವರಿ 2021, 8:05 IST
ಕಾಳಗಿಯಲ್ಲಿ ಬುಧವಾರ ಬಿಜೆಪಿ ರೈತ ಮೋರ್ಚಾದಿಂದ ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು
ಕಾಳಗಿಯಲ್ಲಿ ಬುಧವಾರ ಬಿಜೆಪಿ ರೈತ ಮೋರ್ಚಾದಿಂದ ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು   

ಕಾಳಗಿ: ‘ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲು ನೇರ ಖರೀದಿಗಾಗಿ ಪ್ರತಿ ಹಳ್ಳಿಯಲ್ಲಿ ಎಪಿಎಂಸಿ ಅಸ್ತಿತ್ವಕ್ಕೆ ತರುವ ಸಲುವಾಗಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ಪಕ್ಷ ರೈತರಿಗೆ ದಿಕ್ಕುತಪ್ಪಿಸುವ ಕುತಂತ್ರ ಮಾಡುತ್ತಿದೆ’ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ ಧುತ್ತರಗಿ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಮಂಡಲ ರೈತ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಮಾತನಾಡಿ ‘ಈ ಹಿಂದೆ ರೈತರು ಮಾತ್ರ ಹೊಲ ಖರೀದಿಸಲು ಸಾಧ್ಯವಾಗುತ್ತಿತ್ತು. ಈಗ ಯಾರು ಬೇಕಾದರೂ ಹೊಲ ಖರೀದಿ ಮಾಡಬಹುದು. ನೀರಾವರಿ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ಇಲ್ಲ. ಟ್ರ್ಯಾಕ್ಟರ್ ಖರೀದಿ, ಬೀಜ, ಗೊಬ್ಬರಕ್ಕೆ ಒಳ್ಳೆಯ ಸಬ್ಸಿಡಿ ದೊರೆಯುತ್ತಿದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಚರ್ಚೆ ಅಂತಿಮ ಹಂತದಲ್ಲಿದೆ. ಈ ಎಲ್ಲದಕ್ಕೂ ಪ್ರಧಾನಿ ಮೋದಿ ಮತ್ತು ಸಿಎಂ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಹೆಚ್ಚು ಉಪಯೋಗಕಾರಿಯಾಗಿವೆ. ಅವುಗಳ ಬಗ್ಗೆಯೆ ರೈತರಿಗೆ ಮಾಹಿತಿ ನೀಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯ ಪ್ರತಿ ಹಳ್ಳಿಯಲ್ಲಿ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

ಚಿಂಚೋಳಿ ಎಪಿಎಂಸಿ ಉಪಾಧ್ಯಕ್ಷ ಅಣ್ಣರಾವ ಪೆದ್ದಿ, ಬಿಜೆಪಿ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಮಹೇಂದ್ರ ಪೂಜಾರಿ, ಬಿಜೆಪಿ ರೈತ ಮೋರ್ಚಾ ಮಂಡಲ ಅಧ್ಯಕ್ಷ ಶಿವರಾಜ ಪಾಟೀಲ, ಕೋಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ತಾಂಡೂರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗುಂಡಪ್ಪ ಮಾಳಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ಕಲ್ಯಾಣ ಸಂರಕ್ಷಣಾ ಮಸೂದೆ ಮತ್ತು ಭೂ ಸುಧಾರಣಾ ಕಾಯ್ದೆ ಕುರಿತು ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಉದ್ದೇಶ, ರಚನೆ ಬಗ್ಗೆ ಮಾಹಿತಿ ನೀಡಿದರು.

ಮುಖಂಡರಾದ ಫಕೀರಯ್ಯ ಸ್ಥಾವರಮಠ, ಶರಣಗೌಡ ಪಾಟೀಲ, ನಾಗರಾಜ, ಈರಣ್ಣ ತೆಂಗಳಿಕರ್, ಬಸವರಾಜ ಕುಡ್ಡಳ್ಳಿ, ಶರಣು ಬುಬಲಿ, ಸಂಜುರೆಡ್ಡಿ, ಬಸವರಾಜ ಪುಣ್ಯಶೆಟ್ಟಿ, ರೇವಣಸಿದ್ದಪ್ಪ ಪಾಟೀಲ, ಮಲ್ಲಿಕಾರ್ಜುನ, ಜಗನ್ನಾಥ, ಕಾಳಪ್ಪ ಕರೆಮನೋರ, ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.