ADVERTISEMENT

ರೈತರ ನಡೆ ಆಲಮಟ್ಟಿ ಜಲಾಶಯ ಕಡೆ’ ಹೋರಾಟ ಫೆ.9ರಂದು: ಲಕ್ಷ್ಮೀಕಾಂತ ಎ.ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:43 IST
Last Updated 7 ಫೆಬ್ರುವರಿ 2026, 2:43 IST
<div class="paragraphs"><p>ಲಕ್ಷ್ಮೀಕಾಂತ ಎ.ಪಾಟೀಲ</p></div>

ಲಕ್ಷ್ಮೀಕಾಂತ ಎ.ಪಾಟೀಲ

   

ಕಲಬುರಗಿ: ‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3 ಅನುಷ್ಠಾನಕ್ಕಾಗಿ ಮತ್ತು ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ‘ರೈತರ ನಡೆ ಆಲಮಟ್ಟಿ ಜಲಾಶಯ ಕಡೆ’ ಹೋರಾಟವನ್ನು ಫೆ.9ರಂದು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಬಳಿ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ.ಪಾಟೀಲ ತಿಳಿಸಿದರು.

‘ಅಂದು ಆಲಮಟ್ಟಿ ಜಲಾಶಯದ 5 ಕಿ.ಮೀ ದೂರದಿಂದ ಜಲಾಶಯದವರೆಗೆ ಪಾದಯಾತ್ರೆ ನಡೆಸಲಾಗುವುದು. ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ರೈತರು ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ನಾರಾಯಣಪುರ ಜಲಾಶಯದಲ್ಲಿ 14 ಟಿಎಂಸಿ ಹೂಳು, ಆಲಮಟ್ಟಿ ಜಲಾಶಯದಲ್ಲಿ 17 ಟಿಎಂಸಿ ಹೂಳು ತುಂಬಿರುವುದರಿಂದ ನಮ್ಮ ಭಾಗಕ್ಕೆ ನೀರಿನ ಸಮಸ್ಯೆ ಆಗುತ್ತಿದೆ. ಇದರಿಂದ ಹಿಂಗಾರು ಬೆಳೆಗಳಿಗೆ ಮತ್ತು ಕುಡಿಯಲು ನೀರು ಸಿಗುತ್ತಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ADVERTISEMENT

‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3 ಅನುಷ್ಠಾನದಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅಂದರೆ ಆಲಮಟ್ಟಿ ಜಲಾಶಯ ಗೇಟ್ 519.60 ಮೀಟರ್‌ನಿಂದ 524.256 ಮೀಟ‌ರ್‌ವರೆಗೆ ಎತ್ತರಿಸುವುದರಿಂದ ಇನ್ನೂ ಹೆಚ್ಚು 150 ಟಿಎಂಸಿ ನೀರು ಸಂಗ್ರಹಿಸಬಹುದು. ಇದರಿಂದ ಮುಳುವಾಡಿ, ಚಿಮ್ಮಲಗಿ, ಇಂಡಿ ಸೇರಿ 9 ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಬಹುದು. ಈ ಮೂಲಕ 5.94 ಲಕ್ಷ ಹೆಕ್ಟೇರ್‌ ಪ್ರದೇಶ ಹೆಚ್ಚುವರಿಯಾಗಿ ನೀರಾವರಿ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿ ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳ ನೂರಾರು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸಿಗುತ್ತದೆ’ ಎಂದು ತಿಳಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಅಣವೀರ ಹೆಬ್ಬಾಳ, ಪ್ರಮುಖರಾದ ಸಂಜುಕುಮಾರ ಕುಡಕಿ, ಮಲ್ಲಿಕಾರ್ಜುನ ಬಿ.ಯಾದಗಿರಿ, ಸಿದ್ದಲಿಂಗ ಪೂಜಾರಿ, ಮಹೇಶ ಪೂಜಾರಿ, ಸಿದ್ದಣಗೌಡ ಅಂಬರಖೇಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.