ADVERTISEMENT

ಎಡಿಜಿಪಿಗೆ ನಿಂದನೆ; ಶ್ರೀರಾಮ ಸೇನೆ ಅಧ್ಯಕ್ಷರ ವಿರುದ್ಧ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 15:34 IST
Last Updated 15 ಮಾರ್ಚ್ 2022, 15:34 IST
ಶ್ರೀರಾಮಸೇನೆ ಅಧ್ಯಕ್ಷರೂ ಆದ ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ
ಶ್ರೀರಾಮಸೇನೆ ಅಧ್ಯಕ್ಷರೂ ಆದ ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ    

ಕಲಬುರಗಿ: ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಜಾಲತಾಣದಲ್ಲಿ ಪ್ರಕಟವಾದ ವಿಡಿಯೊ ಆಧರಿಸಿ ಶ್ರೀರಾಮಸೇನೆ ಅಧ್ಯಕ್ಷರೂ ಆದ ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಜೇವರ್ಗಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯಾಗಿದ್ದನ್ನು ಖಂಡಿಸಿ ಫೆಬ್ರುವರಿ 28ರಂದು ಜೇವರ್ಗಿ ಪಟ್ಟಣದ ಅಖಂಡೇಶ್ವರ ಚೌಕದಲ್ಲಿ ಶ್ರೀರಾಮಸೇನೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸ್ವಾಮೀಜಿ, ಎಡಿಜಿಪಿ ಅಲೋಕ್‌ ಕುಮಾರ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಈ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಕಲಬುರಗಿ ಡಿಸಿಆರ್‌ಬಿ ಘಟಕದ ಹೆಸ್‌ ಕಾನ್‌ಸ್ಟೆಬಲ್‌ ಮೋಹನಕುಮಾರ್ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೇ, ತಮ್ಮ ಭಾಷಣದಲ್ಲಿ ಜೇವರ್ಗಿಯ ಪದವಿ ಕಾಲೇಜಿನ ಬಳಿ ಹಿಜಾಬ್ ವಿವಾದದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ತರಗತಿಯೊಳಗೆ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ತಡೆದ ಉಪನ್ಯಾಸಕರ ಕ್ರಮವನ್ನು ಪ್ರಶ್ನಿಸಿದ್ದಾಗ ಶ್ರೀರಾಮಸೇನೆ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಗ್ಗೆಯೂ ಟೀಕಿಸಿದ್ದರು. ಹೀಗಾಗಿ, ಸರ್ಕಾರಿ ನೌಕರರಿಗೆ ಅವಾಚ್ಯ ಪದಗಳಿಂದ ಬೈದಿದ್ದಕ್ಕಾಗಿ ಈ ದೂರು ದಾಖಲಿಸಲಾಗಿದೆ ಎಂದು ಮೋಹನಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ತಮ್ಮ ವಿರುದ್ಧ ದಾಖಲಾದ ದೂರಿನ ಕುರಿತು ಪ್ರತಿಕ್ರಿಯೆ ನೀಡಿದ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ, ‘ಪೊಲೀಸರ ಅಸಮರ್ಥತೆ, ಕರ್ತವ್ಯಲೋಪವನ್ನು ಪ್ರಶ್ನಿಸಿದ್ದಕ್ಕಾಗಿ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಸಂಘಟನೆಗಳ ಹೋರಾಟದ ಲಾಭವನ್ನು ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇರುವಾಗಲೇ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ದೂರು ದಾಖಲಾಗಿರುವುದು ವಿಷಾದಕರ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.