ಅಫಜಲಪುರ: ತಾಲ್ಲೂಕಿನಲ್ಲಿ ಭೀಮಾ ಪ್ರವಾಹ ಕಡಿಮೆಯಾಗಿ 2 ದಿನ ಕಳೆದರೂ ಪ್ರವಾಹ ಪೀಡಿತ ಗ್ರಾಮಗಳ ನರಕಯಾತನೆ ಇನ್ನೂ ನಿಂತಿಲ್ಲ.
ಪ್ರವಾಹದಿಂದ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೊಂದರೆ ಆಗಿದೆ. ಮನೆಗಳಿಗೆ ನೀರು ಹೊಕ್ಕಿದೆ. ಇನ್ನೊಂದು ಕಡೆ ಕೆರೆಕಟ್ಟೆ, ರಸ್ತೆಗಳು ಹಾಳಾಗಿ ಹೋಗಿವೆ. ವಿದ್ಯುತ್ ಕಂಬ ಹಾಳಾಗಿದ್ದರಿಂದ ಗ್ರಾಮಗಳಲ್ಲಿ ಇದುವರೆಗೂ ವಿದ್ಯುತ್ ಪೂರೈಕೆಯಾಗಿಲ್ಲ. ಇದರಿಂದ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ.
ಸಾಕಷ್ಟು ರೈತರು ಮನೆ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಮತ್ತೆ ನೆರೆ ನಿಂತರೂ ಮಳೆ ಬರುತ್ತಲೇ ಇದೆ. ಹೀಗಾಗಿ ಪ್ರವಾಹ ನಿರ್ವಹಣೆ ಕಾರ್ಯಕ್ಕೆ ತೊಂದರೆ ಆಗುತ್ತಿದೆ. ಇದೀಗ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮನೆ ಕಳೆದುಕೊಂಡವರ ಅರ್ಜಿ ಪಡೆಯುವ ಕೆಲಸ ನಡೆದಿದೆ.
ಪ್ರವಾಹಕ್ಕೆ ಒಳಗಾಗಿರುವ ಬಂಕಲಗಾ ಗ್ರಾಮದಲ್ಲಿ ಇನ್ನೂ ನೀರು ನಿಂತುಕೊಂಡಿದೆ. ಗ್ರಾಮದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಹದಿಂದ ಎಲ್ಲವೂ ಹಾಳಾಗಿ ಹೋಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕಲ್ಲಪ್ಪ ಪ್ಯಾಟಿ ಹೇಳಿದರು.
ಭೀಮಾ ಪ್ರವಾಹಕ್ಕೆ ನದಿ ದಂಡೆಯ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ತೊಗರಿ, ಹತ್ತಿ, ಮೆಕ್ಕೆಜೋಳ ನಾಶವಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ತೇವಾಂಶ ಜಾಸ್ತಿ ಇರುವದರಿಂದ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಹದಗೆಟ್ಟ ರಸ್ತೆಗಳು: ಭೀಮಾ ಪ್ರವಾಹದಿಂದ ಭೀಮಾ ದಡದ ಗ್ರಾಮಗಳ ರಸ್ತೆಗಳು ಹಾಳಾಗಿ ಹೋಗಿವೆ. ಬಂದರವಾಡ, ಜೇವರ್ಗಿ(ಬಿ), ಜೇವರ್ಗಿ(ಕೆ), ನಂದರಗಾ, ಸೊನ್ನ, ಘತ್ತರಗಾ, ಹಿಂಚಗೇರಾ, ಕಿರಸಾವಳಗಿ, ಟಾಕಳಿ, ಉಮರ್ಗಾ ರಸ್ತೆಗಳು ಹಾಳಾಗಿ ಹೋಗಿವೆ. ಕೆಲವು ಕಡೆ ಇಟ್ಟಿಗೆ ತಯಾರು ಮಾಡುವ ಕಾರ್ಮಿಕರ ಶೆಡ್ಗಳು ಕಿತ್ತುಕೊಂಡು ಹೋಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.