ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಕಂದಾಯ ಹೋಬಳಿ ವಲಯದ ಕೆರೋಳ್ಳಿ, ಬೆನಕನಳ್ಳಿ, ಬಂಟನಳ್ಳಿ, ಶಿರೋಳ್ಳಿ, ರುದ್ನೂರು, ರಾಯಕೋಡ ಮತ್ತು ಚಿಂತಪಳ್ಳಿ, ಭುತ್ಪೂರ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಭಾರಿಯಿಂದ 102 ಮನೆಗಳಿಗೆ ನೀರು ನುಗ್ಗಿದ್ದಲ್ಲದೆ ಕೆಲವು ಮನೆಗಳ ಗೋಡೆ ಕುಸಿದಿದೆ ಎಂದು ಕಂದಾಯ ನಿರೀಕ್ಷಕ ಸುಭಾಷ ನಿಡಗುಂದಿ ತಿಳಿಸಿದ್ದಾರೆ.
ಸೋಮವಾರ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು ಮಳೆ ಹಾನಿಯನ್ನು ಪರಿಶೀಲಿಸಿದರು.
ತಾಲ್ಲೂಕಿನ ಶಿರೋಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೋಳ್ಳಿ, ಶಿರೋಳ್ಳಿ ತಾಂಡಾ ಹಾಗೂ ರುದ್ನೂರು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಮಳೆ ನೀರು ಮನೆಗಳಿಗೆ ನುಗ್ಗಿ ಜನರ ಜೀವನಾವಶ್ಯಕ ವಸ್ತುಗಳು ಹಾಳಾಗಿವೆ ಎಂದು ಬಿಜೆಪಿ ಮುಖಂಡ ಎಪಿಎಂಸಿ ಸದಸ್ಯ ಮಲ್ಲಿಕಾರ್ಜುನ ಕೊಡದೂರು ತಿಳಿಸಿದ್ದಾರೆ.
ರುದ್ನೂರು ಗ್ರಾಮದಲ್ಲಿ 10ರಿಂದ 15, ಶಿರೋಳ್ಳಿಯಲ್ಲಿ 10 ಮತ್ತು ಶಿರೋಳ್ಳಿ ತಾಂಡಾದಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನರು ಇಡೀ ರಾತ್ರಿ ಮನೆಯಿಂದ ನೀರು ಹೊರ ಹಾಕುವುದರಲ್ಲಿಯೇ ಕಳೆದರು ಎಂದರು.
ಗ್ರಾಮ ಲೆಕ್ಕಾಧಿಕಾರಿ ಎಲ್ಲಿ?: ಗ್ರಾಮಕ್ಕೆ ಕಂದಾಯ ನಿರೀಕ್ಷಕರು ಸೋಮವಾರ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಆದರೆ ಜನರ ಆಸ್ತಿಪಾಸ್ತಿ ಹಾನಿಯಾದ ವರದಿ ನೀಡಲು ಬರಬೇಕಿದ್ದ ಗ್ರಾಮ ಲೆಕ್ಕಾಧಿಕಾರಿ ಬಂದಿಲ್ಲ. ಕಷ್ಟ ಕಾಲದಲ್ಲಿ ಗ್ರಾಮಕ್ಕೆ ಬಾರದ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಯಕೋಡ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಎಂದು ಯುವ ಮುಖಂಡ ಚಂದ್ರು ಮೈಲ್ವಾರ್ ತಿಳಿಸಿದರು.
ಭುತ್ಪೂರ, ಚಿಂತಪಳ್ಳಿ ಮೊದಲಾದ ಗ್ರಾಮಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಕೃಷಿಕರು ಹಾಗೂ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.