ADVERTISEMENT

ಕಲಬುರಗಿ | ಸೇವಂತಿಗೆ, ಗೋಬಿ ಬೆಳೆದು ಕೈತುಂಬ ಆದಾಯ

20 ಗುಂಟೆಯಲ್ಲಿ ತೋಟಗಾರಿಕೆ, ಪುಷ್ಪ ಕೃಷಿ ಮಾಡುತ್ತಿರುವ ಖಾಜಾ ಕೋಟನೂರ ರೈತ ಶಾಂತವೀರ

ಮನೋಜ ಕುಮಾರ್ ಗುದ್ದಿ
Published 8 ಫೆಬ್ರುವರಿ 2026, 5:34 IST
Last Updated 8 ಫೆಬ್ರುವರಿ 2026, 5:34 IST
ಕಲಬುರಗಿ ತಾಲ್ಲೂಕಿನ ಖಾಜಾ ಕೋಟನೂರ ಗ್ರಾಮದಲ್ಲಿ ತಾವು ಬೆಳೆದ ಸೇವಂತಿಗೆ ಹೂವಿನ ಪಡದಲ್ಲಿ ವಿಠ್ಠಲ ದಂಗಾಪುರ, ಶಾಂತವೀರ ಹಾಗೂ ಸುಮಂಗಲಾ
ಕಲಬುರಗಿ ತಾಲ್ಲೂಕಿನ ಖಾಜಾ ಕೋಟನೂರ ಗ್ರಾಮದಲ್ಲಿ ತಾವು ಬೆಳೆದ ಸೇವಂತಿಗೆ ಹೂವಿನ ಪಡದಲ್ಲಿ ವಿಠ್ಠಲ ದಂಗಾಪುರ, ಶಾಂತವೀರ ಹಾಗೂ ಸುಮಂಗಲಾ   

ಕಲಬುರಗಿ: ಸಾಧಿಸುವ ಛಲವಿದ್ದರೆ, ನಿತ್ಯ ಶ್ರಮಪಡಲು ತಯಾರಿದ್ದರೆ ಕಡಿಮೆ ಭೂಮಿಯಲ್ಲೂ ಚಿನ್ನದಂತಹ ಬೆಳೆ ತೆಗೆಯಬಹುದು ಎಂಬುದಕ್ಕೆ ನಗರದ ಹೊರವಲಯದ ಖಾಜಾ ಕೋಟನೂರ ಗ್ರಾಮದಲ್ಲಿ ಜಮೀನು ಹೊಂದಿರುವ ಶಾಂತವೀರ ದಂಗಾಪುರ ಅವರೇ ಉದಾಹರಣೆ.

ಒಂದು ಕಡೆ ಬೃಹತ್ ಖಾಜಾ ಕೋಟನೂರ ಕೆರೆ, ಮತ್ತೊಂದು ಕಡೆ ರಸ್ತೆಯನ್ನು ಹೊಂದಿರುವ ಜಮೀನಿನಲ್ಲಿ ಶಾಂತವೀರ ಅವರು ಅನಾದಿಕಾಲದಿಂದಲೂ ಪುಷ್ಪಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ಕಲಬುರಗಿ ನಗರಕ್ಕೆ ಸಮೀಪದಲ್ಲೇ ಇರುವುದರಿಂದ ಮಾರುಕಟ್ಟೆಗೆ ಬರುವುದು ಇನ್ನೂ ಸುಲಭ. ಅವರ ತಂದೆ ವಿಠ್ಠಲ ದಂಗಾಪುರ ಅವರೂ ಹಿಂದೆ ಗುಲಾಬಿ ಹೂ ಬೆಳೆಯುತ್ತಿದ್ದರು. ಅದರಿಂದಲೇ ₹ 3 ಲಕ್ಷ ವರಮಾನ ಬಂದಿತ್ತು. ಇದೀಗ 10 ಗುಂಟೆ ಗುಲಾಬಿ ಜೊತೆಗೆ ಸೇವಂತಿಗೆ ಹೂ ಬೆಳೆಯುತ್ತಿದ್ದು, ಶಾಂತವೀರ ಹಾಗೂ ಅವರ ಪತ್ನಿ ಸುಮಂಗಲಾ ಅವರು ಬೆಳಿಗ್ಗೆ 5ರಿಂದ 8ರವರೆಗೆ ಹೂಗಳನ್ನು ಬಿಡಿಸುತ್ತಾರೆ. ನಂತರ ಹೂಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತಾರೆ. ಅತಿ ಬೇಡಿಕೆ ಇದ್ದ ಸಂದರ್ಭದಲ್ಲಿ ಪ್ರತಿ ಕೆ.ಜಿ.ಗೆ ₹ 60 ದರ ಸಿಕ್ಕಿದೆ. ತೀರಾ ಕನಿಷ್ಠವೆಂದರೂ ₹ 40 ದರ ಸಿಕ್ಕೇ ಸಿಗುತ್ತದೆ. ಒಂದಾ ಅಂದಾಜಿನ ಪ್ರಕಾರ ಪ್ರತಿ ತಿಂಗಳು ಸೇವಂತಿಗೆ ಹೂ ಮಾರಾಟದಿಂದಲೇ ₹ 80 ಸಾವಿರದವರೆಗೂ ಲಾಭ ಸಿಗುತ್ತಿದೆ.

ಇದರ ಜೊತೆಗೆ ಇತ್ತೀಚೆಗೆ ನಗರ ಪ್ರದೇಶದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಗೋಬಿಯ 2000 ಸಸಿಗಳನ್ನು ನಾಟಿ ಮಾಡಿದ್ದು, ಅವೂ ಈಗ ಕಟಾವಿಗೆ ಬಂದಿವೆ. ಒಂದೊಂದು ಗೋಬಿಗೆ ₹ 30ರಿಂದ ₹ 40ರವರೆಗೆ ದರ ಇದೆ. ‘ಎಷ್ಟು ಬೇಕೋ ಅಷ್ಟು ಮಾತ್ರ ಕಟಾವು ಮಾಡಿಕೊಂಡು ಮಾರಾಟ ಮಾಡುತ್ತೇವೆ. ಅದನ್ನೂ 10 ಗುಂಟೆಯಲ್ಲಿ ಬೆಳೆದಿದ್ದು, ಬೆಳೆ ಉತ್ತಮವಾಗಿದೆ’ ಎನ್ನುತ್ತಾರೆ ಶಾಂತವೀರ.

ADVERTISEMENT

‘ಪುಷ್ಪ ಕೃಷಿಯು ನಿರಂತರ ಶ್ರಮವನ್ನು ಬೇಡುತ್ತದೆ. ಪ್ರತಿನಿತ್ಯವೂ ಹೂಗಳನ್ನು ಕಟಾವು ಮಾಡಲೇಬೇಕು. ಒಮ್ಮೊಮ್ಮೆ ಕಾರ್ಮಿಕರ ಸಮಸ್ಯೆಯೂ ಕಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಮ್ಮ ಕುಟುಂಬ ಸದಸ್ಯರೇ ಹೂ ಹಾಗೂ ಗೋಬಿಯನ್ನು ಕಟಾವು ಮಾಡುತ್ತೇವೆ. ಹೊಲದ ಬಳಿಯೇ ಆಟೊ ರಿಕ್ಷಾ ತಂದು ಅದರಲ್ಲಿ ಹೂ ಹಾಗೂ ಗೋಬಿಯನ್ನು ಕಲಬುರಗಿಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತೇವೆ. ಹಲವು ವರ್ಷಗಳಿಂದ ಪುಷ್ಪ ಕೃಷಿಯಲ್ಲಿ ತೊಡಗಿದ್ದರಿಂದ ಹೂವಿನ ವ್ಯಾಪಾರಿಗಳ ಪರಿಚಯವೂ ಆಗಿದೆ. ಹೀಗಾಗಿ, ಅಗತ್ಯವಿದ್ದಷ್ಟು ಒಯ್ದು ಕೊಡುತ್ತೇವೆ. ಬೆಳೆಯುವ ಹೂವಿನ ಪ್ರಮಾಣವೂ ಕಡಿಮೆ ಇರುವುದರಿಂದ ಬಹುತೇಕ ಹೂ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಮಾರಾಟವಾಗುತ್ತದೆ’ ಎನ್ನುತ್ತಾರೆ ಅವರು.

‘ನಗರದಿಂದ ಖಾಜಾ ಕೋಟನೂರು ಕೆರೆ ನೋಡಲೆಂದು ಬರುವವರು ಹೊಲಕ್ಕೆ ಭೇಟಿ ನೀಡಿ ಪುಷ್ಪ ಕೃಷಿಯನ್ನು ನೋಡಿ ಮಾಹಿತಿ ಪಡೆಯುತ್ತಾರೆ. ಕೆಲವರು ಹೂ ಮತ್ತು ಗೋಬಿಯನ್ನು ಖರೀದಿ ಮಾಡಿಯೂ ಹೋಗುತ್ತಾರೆ. ನಾವು ಹೂವಿನ ಬೀಜಗಳನ್ನು ಹುಮನಾಬಾದ್‌ನ ನರ್ಸರಿಯಿಂದ ತಂದು ನಾಟಿ ಮಾಡಿದ್ದೇವೆ. ನಿರಂತರವಾಗಿ ಸೇವಂತಿಗೆ ಹೂ ಉತ್ತಮ ಇಳುವರಿ ಕೊಡುತ್ತಿದೆ’ ಎನ್ನುತ್ತಾರೆ ಶಾಂತವೀರ ಅವರ ತಂದೆ ವಿಠ್ಠಲ ದಂಗಾಪುರ. 

ಎಂಟು ಎಕರೆಯ ಪೈಕಿ ಹತ್ತು ಗುಂಟೆಯಲ್ಲಿ ಸೇವಂತಿಗೆ, ಇನ್ನರ್ಧ ಎಕರೆಯಲ್ಲಿ ಗುಲಾಬಿ, ಮತ್ತೆ 10 ಗುಂಟೆಯಲ್ಲಿ ಗೋಬಿ ಬೆಳೆದಿದ್ದಾರೆ. ಉಳಿದ ಭೂಮಿಯಲ್ಲಿ ಬಾಳೆ, ಕಬ್ಬು, ತೊಗರಿಯನ್ನು ಬೆಳೆದು ವರ್ಷಪೂರ್ತಿ ವರಮಾನ ಪಡೆಯುತ್ತಿದ್ದಾರೆ.

ವಿಠ್ಠಲ ದಂಗಾಪುರ ಅವರ ತೋಟದಲ್ಲಿ ಕಟಾವಿಗೆ ಬಂದಿರುವ ಗೋಬಿ 
ಸಂತೋಷ ಇನಾಮದಾರ್
ಸೇವಂತಿಗೆಯು ಮೂರು ತಿಂಗಳ ಬೆಳೆಯಾಗಿದ್ದು ₹ 1.20ನಂತೆ ಸಸಿಗಳನ್ನು ತರುತ್ತೇವೆ. ಸಸಿ ನೆಟ್ಟ ಎರಡು ತಿಂಗಳ ಬಳಿಕ ಹೂವಿನ ಇಳುವರಿ ಶುರುವಾಗುತ್ತದೆ. ಹಬ್ಬ ಅಮಾವಾಸ್ಯೆ ಸಂದರ್ಭದಲ್ಲಿ ಉತ್ತಮ ವರಮಾನ ಸಿಗುತ್ತದೆ
ಶಾಂತವೀರ ದಂಗಾಪುರ ರೈತ ಖಾಜಾ ಕೋಟನೂರ

120 ಎಕರೆಯಲ್ಲಿ ಪುಷ್ಪಕೃಷಿ ಕಲಬುರಗಿ ತಾಲ್ಲೂಕಿನ ಖಾಜಾ ಕೋಟನೂರ ಇಟಗಾ ಸುತ್ತಮುತ್ತಲೂ ಮೂರು ವರ್ಷಗಳಲ್ಲಿ 120 ಎಕರೆಯಲ್ಲಿ ರೈತರು ಪುಷ್ಪಕೃಷಿ ಮಾಡುತ್ತಿದ್ದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಇನಾಮದಾರ್. ‘ಇಲಾಖೆಯು ಅವರು ಎಷ್ಟು ಎಕರೆಯಲ್ಲಿ ಪುಷ್ಪಕೃಷಿ ಮಾಡುತ್ತಾರೋ ಅಷ್ಟು ಭೂಮಿಗೆ ಹನಿ ನೀರಾವರಿ ಮಾಡಿಕೊಳ್ಳಲು ಶೇ 90ರಷ್ಟು ಧನಸಹಾಯ ಮಾಡುತ್ತಿದೆ. ಹೆಚ್ಚಿನ ರೈತರು ಗುಲಾಬಿ ಬೆಳೆದು ಉತ್ತಮ ವರಮಾನ ಪಡೆಯುತ್ತಿದ್ದಾರೆ. ರೈತರೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಡ್ ಪಡೆದುಕೊಂಡು ತಮ್ಮ ಹೊಲದಲ್ಲಿ ಕೆಲಸ ಮಾಡಿ ಕೂಲಿ ಹಣ ಪಡೆಯಬಹುದು. ಎಸ್‌ಸಿ ಎಸ್‌ಪಿ–ಟಿಎಸ್‌ಪಿ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಸವಲತ್ತು ಪಡೆಯಬಹುದು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.