
ಬಸವರಾಜ ಕೋರಳ್ಳಿ
ಕಲಬುರಗಿ: ‘ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಫಜಲಪುರ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಮೃತ ರೈತರ ಹೆಸರಿನಲ್ಲಿ ಸಾಲ ಮಂಜೂರು ಮಾಡಿ, ತಾವೇ ಹಣ ಎತ್ತಿ ಹಾಕಿಕೊಂಡಿದ್ದಾರೆ’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಎಸ್.ಕೋರಳ್ಳಿ ಆರೋಪಿಸಿದರು.
‘ಮಹಾದೇವಿ ಪರಮೇಶ್ವರ ಪಾಟೀಲ ಅವರ ಹೆಸರಿನಲ್ಲಿ ಖಾತೆ ಇದ್ದು, ಮಹಾದೇವಿ ಅವರು 2024ರ ಜೂನ್ 11ರಂದು ನಿಧನರಾಗಿದ್ದಾರೆ. ಆದರೆ, 2024ರ ಸೆಪ್ಟೆಂಬರ್ 24ರಂದು ಅವರ ಖಾತೆಯಲ್ಲಿರುವ ₹ 22,083 ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಪರಮೇಶ್ವರ ಪಾಟೀಲ ಅವರ ಜಮೀನಿನ ಮೇಲೆ 2025ರ ಫೆಬ್ರುವರಿ 21ರಂದು ₹ 25,544 ಸಾಲ ಮಂಜೂರು ಮಾಡಲಾಗಿದೆ. ಪರಮೇಶ್ವರ 2024ರ ನವೆಂಬರ್ 6ರಂದು ನಿಧನರಾಗಿದ್ದಾರೆ ಮತ್ತು ಸಾಲಕ್ಕಾಗಿ ಅರ್ಜಿಯೇ ಸಲ್ಲಿಸಿಲ್ಲ! ಸಂಘದ ಚುನಾವಣೆ ಬಂದಾಗ ಈ ಪ್ರಕರಣಗಳು ಕುಟುಂಬಸ್ಥರ ಗಮನಕ್ಕೆ ಬಂದಿವೆ. ಇಂಥ ಅನೇಕ ಪ್ರಕರಣಗಳಿದ್ದು, ತನಿಖೆ ನಡೆಸಬೇಕು’ ಎಂದರು.
‘ಕಲಬುರಗಿ ಮತ್ತು ಯಾದಗಿರಿಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಚೇರಿಗೆ ದಾಖಲೆಗಳ ಸಮೇತ ಲಿಖಿತ ದೂರು ಸಲ್ಲಿಸಲಾಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕರೆ ಮಾಡಿ ಕೂಡಲೇ ರೈತರಿಗೆ ಪರಿಹಾರ ದೊರೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಅಲ್ಲದೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಉಪನಿಬಂಧಕರಿಗೆ ಜಂಟಿ ನಿಬಂಧಕರು ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ವಿಚಾರಣೆಯನ್ನೂ ನಡೆಸುತ್ತಿಲ್ಲ’ ಎಂದು ಆರೋಪಿಸಿದರು.
ವರದಾ ಸ್ವಾಮಿ, ಅರುಣಕುಮಾರ, ಸದಾನಂದ, ಮುತ್ತು ಕುರಿಮನಿ, ರಾಹುಲ್ ಹಂಚಾಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.