ಆಳಂದ: ಕರ್ನಾಟಕದ ಗಡಿಭಾಗದ ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ಕನ್ನಡದ ನುಡಿಯು ಶ್ರೀಮಂತವಾಗಲಿದೆ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರ ಹಾಗೂ ಜ್ಞಾನಸಾಗರ ಶಿಕ್ಷಣ ಮತ್ತು ಸಾಂಸ್ಕೃತಿಕ ಒಕ್ಕೂಟ ಸಹಯೋಗದಲ್ಲಿ ಹಮ್ಮಿಕೊಂಡ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾರಾಷ್ಟ್ರ, ತೆಲಂಗಾಣ, ಕೇರಳದ ಗಡಿಯಲ್ಲಿನ ಕನ್ನಡಿಗರು ತಮ್ಮ ಭಾಷೆ, ಕಲೆ ಉಳಿಸಲು ಸಹ ಸೂಕ್ತ ಅವಕಾಶ, ವೇದಿಕೆಗಾಗಿ ಪರದಾಡುವ ಸ್ಥಿತಿ ಇದೆ. ಸರ್ಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿಭಾಗದ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಜ್ಞಾನಸಾಗರ ಒಕ್ಕೂಟದ ಕಾರ್ಯದರ್ಶಿ ಪೀರಪ್ಪ ಹಾದಿಮನಿ ಮಾತನಾಡಿ, ರಾಜ್ಯದ ಗಡಿಯಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಶ್ರೀಮಂತವಾಗಿದೆ, ಇಲ್ಲಿನ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವದು ಅಗತ್ಯವಾಗಿದೆ. ನಿರಂತರ ಚಟುವಟಿಕೆಗಳ ಮೂಲಕ ನಾಡು ನುಡಿ ಅಭಿಮಾನ ಬೆಳೆಸಲು ಸಾಧ್ಯವಿದೆ ಎಂದರು.
ಸಂಸ್ಕಾರ ನಿರ್ದೇಶಕ ವಿಠಲ ಚಿಕಣಿ, ಪತ್ರಕರ್ತ ಡಿ.ಎಂ.ಪಾಟೀಲ, ಕಸಾಪ ತಾಲ್ಲೂಕು ಅಧ್ಯಕ್ಷ ಹಣಮಂತ ಶೇರಿ, ರಾಜಶೇಖರ ಹರಿಹರ ಮಾತನಾಡಿದರು.
ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಬಂಗರಗೆ, ಮಂಜುನಾಥ ಕಂದಗೋಳೆ, ಚಂದ್ರಕಲಾ ಬಂಡೆ, ಸಂಜೀವನ ದೇಶಮುಖ,ಧೂಳಪ್ಪ ದ್ಯಾಮನಕರ್, ಶ್ರೀಶೈಲ ಭೀಮಪೂರೆ, ಸುಭಾಷ ಹರಳಯ್ಯ, ವೀರಭದ್ರಪ್ಪ ಹಾರಕೆ , ಶಿವಲಿಂಗಪ್ಪ ತೇಲ್ಕರ್ ಇದ್ದರು. ಈ ಮೊದಲು ಗ್ರಾಮದ ಸ್ವಾಮಿ ವಿವೇಕಾನಂದ ವೃತ್ತದಿಂದ ವಿವಿಧ ಕಲಾವಿದರ ಕುಣಿತ, ನಿಜಾಚರಣೆ ಶಾಲಾ ಮಕ್ಕಳೊಂದಿಗೆ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.