
ಕಲಬುರಗಿ: ಜಿಲ್ಲೆಯ ರೈತರು ನೀರಾವರಿ ಐಪಿ ಸೆಟ್ ಸಂಪರ್ಕಕ್ಕಾಗಿ ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಿಗೆ ಹೆಚ್ಚುವರಿ ಹಣವನ್ನು ನೀಡುತ್ತಿರುವುದು ಕಂಡುಬಂದಿದೆ. ಆದ್ದರಿಂದ ಜೆಸ್ಕಾಂ ನಿಗದಿಪಡಿಸಿದ ಶುಲ್ಕ ಬಿಟ್ಟು ಹೆಚ್ಚುವರಿ ಹಣವನ್ನು ಕೊಡಬಾರದು ಎಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯಾರಾದರೂ ಅನಧಿಕೃತವಾಗಿ ಹಣವನ್ನು ಬೇಡಿದಲ್ಲಿ, ತಕ್ಷಣವೇ ಲಿಖಿತ ದೂರು ಸಲ್ಲಿಸಬೇಕು. ನಿಮ್ಮ ಸಮಸ್ಯೆಗಳಿಗೆ ನ್ಯಾಯಸಮ್ಮತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲು ನಾನು ಸದಾ ಬದ್ಧನಾಗಿದ್ದೇನೆ. ರೈತರ ನಿರಾವರಿ ಪಂಪ್ಸೆಟ್ಗಳಿಗೆ ಅಗತ್ಯವಿರುವ ವಿದ್ಯುತ್ ಮೂಲಸೌಕರ್ಯವನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ‘ನವೀಕೃತ ಶೀಘ್ರ ಸಂಪರ್ಕ ಯೋಜನೆ’ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ’ ಎಂದಿದ್ದಾರೆ.
ನೀರಾವರಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರು ಅಗತ್ಯ ದಾಖಲೆಗಳಾದ ಪಹಣಿ ಪತ್ರ, ನೀರು ಬಳಕೆ ಪ್ರಮಾಣ ಪತ್ರ, ಕೊಳವೆ ಬಾವಿ ಕೊರೆದ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ (ಆಧಾರ್ ಕಾರ್ಡ್, ರೇಷನ್ಕಾರ್ಡ್ ಇತರೆ) ಯೊಂದಿಗೆ ನಿಗದಿತ ನಮೂನೆಯಲ್ಲಿ (ಎ ಫಾರ್ಮ್) ಅರ್ಜಿಯನ್ನು ಸಂಬಧಿತ ಉಪ-ವಿಭಾಗ ಕಚೇರಿಯಲ್ಲಿ ಸಲ್ಲಿಸಬೇಕು. ಪ್ರತಿ ವಿದ್ಯುತ್ ಸಂಪರ್ಕ ಪಡೆಯುವ ನೀರಾವರಿ ಪಂಪ್ಸೆಟ್ಗೆ ₹ 15 ಸಾವಿರ ಮತ್ತು ನೋಂದಣಿ ಶುಲ್ಕ ₹ 59, ಭದ್ರತಾ ಠೇವಣಿ ಪ್ರತಿ ಎಚ್ಪಿಗೆ ₹ 1660, ಮೀಟರ್ ಠೇವಣಿ ₹ 2,891, ಮಾಪಕ ಪೆಟ್ಟಿಗೆ ಶುಲ್ಕ ₹ 566 ರೂಪಾಯಿ ಪಾವತಿಸಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಟಿಸಿ ಸುಟ್ಟ 72 ಗಂಟೆಗಳ ಒಳಗಾಗಿ ಉಚಿತವಾಗಿ ಬದಲಾವಣೆ ಮಾಡಲಾಗುವುದು. ನಗರ ಪ್ರದೇಶಗಳಲ್ಲಿ 24 ಗಂಟೆಗಳ ಒಳಗಾಗಿ ಬದಲಾವಣೆ ಮಾಡಲಾಗುತ್ತದೆ. ಟಿಸಿ ಬದಲಾವಣೆಗೆ ಹಣ ಪಾವತಿ ಮಾಡಬಾರದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.