ಕಲಬುರ್ಗಿ: ಅತ್ಯಂತ ಕ್ಲಿಷ್ಟಕರ ಪ್ರಕರಣ ಭೇದಿಸಿದ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಂಡಿತ ಸಗರ ಅವರು 2020ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರವಾಗಿದ್ದಾರೆ.
ಬೆಂಗಳೂರಿನ ಕೋರಮಂಲಗದ ಕೆಎಸ್ಆರ್ಪಿ 3ನೇ ಬಟಾಲಿಯನ್ ಮೈದಾನದಲ್ಲಿ ಈಚೆಗೆ ಗೃಹ ಇಲಾಖೆ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇನ್ಸ್ಪೆಕ್ಟರ್ ಪಂಡಿತ ಸಗರ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.
2020ರ ಆಗಸ್ಟ್ 27ರಂದು ಇಳಿಸಂಜೆಯಲ್ಲಿ ನಗರದ ಗೋದುತಾಯಿ ಕಾಲೊನಿಯ ಶಿವ ಮಂದಿರ ಹತ್ತಿರ, ಗ್ರಾನೈಟ್ ಉದ್ಯಮಿ ಸುನೀಲ ರಂಕಾ (42) ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಮಬ್ಬುಗತ್ತಲಿನಲ್ಲಿ ಗುಂಡಿಕ್ಕಿದ ದುಷ್ಕರ್ಮಿಗಳು ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಸಿನಿಮೀಯ ರೀತಿಯಲ್ಲಿ ನಡೆದುಹೋದ ಈ ದರೋಡೆ, ಕೊಲೆ ನಗರದ ಜನರನ್ನು ಬೆಚ್ಚಿ ಬೀಳಿಸಿತ್ತು.
ಸಣ್ಣ ಸುಳಿವೂ ಸಿಗದಂತೆ ಕೊಲೆ ಯೋಜನೆ ರೂಪಿಸಿದ್ದ ಆರೋಪಿಗಳೂ ಪರಾರಿಯಾಗಿದ್ದರು. ತಿಂಗಳುಗಟ್ಟಲೇ ಶ್ರಮವಹಿಸಿ ಕೊನೆಗೂ ಸಣ್ಣ ಸುಳಿವು ಪಡೆದ ಪಂಡಿತ ಸಗರ ಅವರು, 2020ರ ಡಿಸೆಂಬರ್ 10ರಂದು ಬೇಧಿಸಿದ್ದರು. ಬಿದ್ದಾಪುರ ಕಾಲೊನಿಯ ಅಂಬರೀಶ ಸುಭಾಷ ರಾಠೋಡ, ಶರಣಸಿರಸಗಿ ತಾಂಡಾದ ರಾಜಶೇಖರ ಅಲಿಯಾಸ್ ಶೇಖರ ರೇವಣಸಿದ್ಧ ರಾಠೋಡ, ವಿಜಯಪುರ ಜಿಲ್ಲೆಯ ಖತೀಜಾಪುರದ ನಾಮದೇವ ಹೇಮು ಲೋಣಾರಿ ಮತ್ತು ಹಡಗಿಲ್ ಹಾರುತಿ ಗ್ರಾಮದ ಗುಂಡು ಶರಣಪ್ಪ ರಾಠೋಡ ಎಂಬುವರನ್ನು ಬಂಧಿಸಿದ್ದರು.
ಪೊಲೀಸ್ ಕಮಿಷನರ್ ಎನ್. ಸತೀಶಕುಮಾರ, ಡಿಸಿಪಿ ಕಿಶೋರಬಾಬು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.