ADVERTISEMENT

ಕಲಬುರಗಿ: ಪ್ರಿವೆಡ್ಡಿಂಗ್‌ ಶೂಟ್‌ಗೆ ತೆರಳಿದ್ದ ಜೋಡಿಗೆ ಸುಲಿಗೆ

ಜಾಪೂರ ಗುಡ್ಡದಲ್ಲಿ ಬೆದರಿಕೆ ಹಾಕಿ 15 ಗ್ರಾಂ ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:03 IST
Last Updated 8 ಡಿಸೆಂಬರ್ 2025, 6:03 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಕಲಬುರಗಿ: ಪ್ರಿವೆಡ್ಡಿಂಗ್‌ ಶೂಟಿಂಗ್‌ ಮಾಡಲು ತೆರಳಿದ ಜೋಡಿಗೆ ಚಾಕು ತೋರಿಸಿ 15 ಗ್ರಾಂ. ಚಿನ್ನಾಭರಣ ಸುಲಿಗೆ ಮಾಡಿದ ಘಟನೆ ಇಲ್ಲಿನ ಬುದ್ಧ ವಿಹಾರ ಹಿಂದುಗಡೆಯ ಜಾಪೂರ ಗುಡ್ಡದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ADVERTISEMENT

ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದ ಆರ್ಕಿಟೆಕ್ಟ್‌ ಎಂಜಿನಿಯರ್‌ ಅಶ್ವರ್ಯಾ ಕೊಲಕುಂದಾ ಮತ್ತು ಕುಸನೂರ ರಸ್ತೆ ತಿಲಕನಗರದ ಕಿರಣಕುಮಾರ ಚಿಟ್ಟಾ ಅವರು ಪ್ರಿವೆಡ್ಡಿಂಗ್‌ ಶೂಟಿಂಗ್‌ ಮಾಡಲು ಕಾರಿನಲ್ಲಿ ಗುಡ್ಡಕ್ಕೆ ತೆರಳಿದ್ದರು. ಕಾರು ನಿಲ್ಲಿಸಿದ ವೇಳೆ ಬೈಕ್‌ನಲ್ಲಿ ಬಂದ ಅಂದಾಜು 25–30 ವಯಸ್ಸಿನ ಮೂವರು ಯುವಕರು, ಇಬ್ಬರಿಗೂ ಚಾಕು ತೋರಿಸಿ ಹೆದರಿಸಿದ್ದಾರೆ. ಯುವತಿಗೆ ‘ಸೋನಾ (ಬಂಗಾರ) ನಿಕಾಲಕೆ ದೇ ನಹಿತೋ ಮಾರದುಂಗಾ’ ಎಂದು ತಂಡದಲ್ಲಿದ್ದ ಸುಲಿಗೆಕೋರನೊಬ್ಬ ಹೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯುವತಿ ಕೊರಳಲ್ಲಿದ್ದ ₹ 80 ಸಾವಿರ ಮೌಲ್ಯದ 10 ಗ್ರಾಂ. ಬಂಗಾರದ ಚೈನ್‌, ₹ 24 ಸಾವಿರ ಮೌಲ್ಯದ 3 ಗ್ರಾಂ ಚಿನ್ನದ ಬ್ರೇಸ್‌ಲೆಟ್‌, ₹ 16 ಸಾವಿರ ಮೌಲ್ಯದ 2 ಗ್ರಾಂ ಚಿನ್ನದುಂಗುರ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಶರಣ ಐಟಿ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಎಂಆರ್‌ಎಂಸಿ ಮೆಡಿಕಲ್‌ ಕಾಲೇಜಿನಲ್ಲಿ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಸಾಮಾಜಿಕ ಹೋರಾಟಗಾರ ಶರಣ ಐಟಿ ವಿರುದ್ಧ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಎಂಆರ್‌ಎಂಸಿ ಮೆಡಿಕಲ್‌ ಕಾಲೇಜಿನ ಡೀನ್‌ ಡಾ.ಶರಣಗೌಡ ಪಾಟೀಲ ದೂರು ನೀಡಿದ್ದಾರೆ.

‘ಶರಣ ಐಟಿ ಅವರು ನಮ್ಮ ಸಂಸ್ಥೆ ಜಮೀನಿನ ವಿಷಯವಾಗಿ ರಿಟ್‌ ಅರ್ಜಿ ಹಾಕಿದ್ದರು. ಆದರೆ, ರಿಟ್‌ ಅರ್ಜಿ ಹಾಕಲು ಹೊರಗಿನ ವ್ಯಕ್ತಿಗೆ ಕಾನೂನಾತ್ಮಕ ಅವಕಾಶವಿಲ್ಲವೆಂದು ಅರ್ಜಿ ವಜಾಗೊಳಿಸಲಾಗಿದೆ. ಇದರಿಂದ ಪ್ರಚೋದಿತಗೊಂಡ ಅವರು ಡಿ.2ರಂದು ನಮ್ಮ ಕಾಲೇಜಿನಲ್ಲಿ ಅತಿಕ್ರಮ ಪ್ರವೇಶ ಮಾಡಿದಾಗ ಭದ್ರತಾ ಮೇಲ್ವಿಚಾರಕ ಮತ್ತು ಭದ್ರತಾ ಸಿಬ್ಬಂದಿಗೆ ಬೆದರಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತದೆ’ ಎಂದು ಡಾ.ಶರಣಗೌಡ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯದ ಪರೀಕ್ಷಾ ಉತ್ತರ ಪತ್ರಿಕೆಗಳ ಭದ್ರತಾ ಕೊಠಡಿಯು ಕಾಲೇಜಿನಲ್ಲಿರುವುದರಿಂದ ಅತಿಕ್ರಮ ಪ್ರವೇಶ ಮಾಡುವಂತಹದ್ದಲ್ಲ. ಶರಣ ಐಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದ್ದಾರೆ.

ವೈದ್ಯ ದಂಪತಿ ಮನೆಯಲ್ಲಿ 84.5 ಗ್ರಾಂ ಚಿನ್ನಾಭರಣ ಕಳವು

ಕಲಬುರಗಿ: ನಗರದ ಲಾಲಗೇರಿ ಕ್ರಾಸ್‌ ಹತ್ತಿರದ ಜನತಾ ಲೇಔಟ್‌ನಲ್ಲಿರುವ ವೈದ್ಯ ದಂಪತಿ ಮನೆಯಲ್ಲಿ ₹7.62 ಲಕ್ಷ ಮೌಲ್ಯದ 84.5 ಗ್ರಾಂ ಚಿನ್ನಾಭರಣ ಮತ್ತು ₹ 40 ಸಾವಿರ ನಗದು ಕಳವು ಮಾಡಲಾಗಿದೆ.

ಡಾ.ಕುಮಾರ ಪ್ರಭುಲಿಂಗಪ್ಪ ಅಂಗಡಿ ಮತ್ತು ಡಾ.ಮೀತಾ ದಂಪತಿ ಮನೆಯಲ್ಲಿ ಕಳ್ಳತನ ನಡೆದಿದೆ. ಈ ಕುರಿತು ಚೌಕ್‌ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

‘30 ಗ್ರಾಂ ಮಂಗಳಸೂತ್ರ, 20 ಗ್ರಾಂ. ಚಪ್ಲಾರ, 10 ಗ್ರಾಂ. ಬ್ರೇಸ್‌ಲೆಟ್‌, 10 ಗ್ರಾಂ. ಮಗುವಿನ ಉಡದಾರ, 10 ಗ್ರಾಂ. ಚೈನ್‌, 2 ಗ್ರಾಂ ಕಿವಿಯ ಬುಗುಡಿ ಕಡ್ಡಿ, 2.5 ಗ್ರಾಂ. ಸುತ್ತುಂಗುರ ಮತ್ತು ₹40 ಸಾವಿರ ಕಳ್ಳತನ ಆಗಿದೆ. ನ.26ರಂದು ತಾಯಿ ಕೊಟ್ಟಿದ್ದ ಚಿನ್ನದ ಆಭರಣಗಳು ಸೇರಿ ವಿವಿಧ ಆಭರಣಗಳನ್ನು ಸಣ್ಣ ಚೀಲದಲ್ಲಿ ಹಾಕಿ ಬೆಡ್‌ರೂಮ್‌ನ ಕಪಾಟಿನಲ್ಲಿ ಇಡಲಾಗಿತ್ತು. ಡಿ.3ರಂದು ಕಪಾಟಿನಲ್ಲಿ ಹಣ ಇಡಲು ಹೋದಾಗ ಕಪಾಟಿನ ಚಾವಿ ತೆರೆದಿರುವುದು ಮತ್ತು ಕಳ್ಳತನ ಆಗಿರುವುದು ಗೊತ್ತಾಗಿದೆ’ ಎಂದು ಡಾ.ಕುಮಾರ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.