ಕಲಬುರಗಿ: ಕ್ರೈಸ್ತ ಸಮುದಾಯದ ಪವಿತ್ರ ಆಚರಣೆಯಾದ ಗುಡ್ ಫ್ರೈಡೆಯನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಶುಕ್ರವಾರ ಶದ್ಧಾಭಕ್ತಿಯಿಂದ ಆಚರಿಸಲಾಯಿತು.
ಹಿಂದೂಸ್ತಾನ್ ಕವನೆಂಟ್ ಚರ್ಚ್, ತಾಜ್ ಸುಲ್ತಾನಪುರ ಸಮೀಪದ ಹೋಲಿಪೆಲೊಶಿಪ್ ಚರ್ಚ್ ಸೇರಿ ವಿವಿಧ ಚರ್ಚ್ಗಳಲ್ಲಿ ಏಸು ಕ್ರಿಸ್ತರು ಸಿಲುಬೆಗೆ ಏರಿದ ಅವಧಿಯಲ್ಲಿ ಎದುರಿಸಿದ ಕಷ್ಟ, ಶೋಷಣೆಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗ, ಅಧ್ಯಾತ್ಮ ಪೂಜಾ ವಿಧಿಯನ್ನು ನಡೆಸಿ, ವಿಶೇಷವಾಗಿ ಪ್ರಾರ್ಥಿಸಲಾಯಿತು.
ನಗರದ ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ನಲ್ಲಿ ರೇ.ಯಶವಂತ ಮೂಡಲಗಿ, ರೆ. ಪಾಲ್ ಮದಕರ್, ರೆ.ಡಿಸೋಜಾ ಥಾಮಸ್ ನೇತೃತ್ವದಲ್ಲಿ ಯೇಸು ದೇವನು ಸಿಲುಬೆಯ ಮೇಲೆ ನುಡಿದ ಸಪ್ತ ಸಂದೇಶಗಳನ್ನು ಓದಲಾಯಿತು.
ಬೆಳಿಗ್ಗೆ 11.30 ಗಂಟೆಗೆ ಆರಂಭವಾದ ಪಾರ್ಥನೆಯು ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಪೌಲ್ ಮಧುಕರ್ ಡಿ.ಎಸ್, ಸುಲೋಮನ್ ದೀವಾಕರ್, ಅನಿತಾ ಕುಮಾರಿ ಡಿಸೋಜಾ, ಯಶವಂತ ಮೂಡಲಗಿ, ಸುಮಂತ್ ಸರಡಗಿ, ಪಿ.ಎಸ್. ಮಚೀಯಾ, ಡಿಸೋಜ್ ಥಾಮಸ್ ಅವರು ಏಸುದೇವರ ಸಂದೇಶವನ್ನು ಓದಿದರು.
ನಗರದ ವಿವಿಧ ಚರ್ಚ್ಗಳಲ್ಲಿ ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ನಗರದ ಸೇಂಟ್ ಮೇರಿ ಚರ್ಚ್ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಯೇಸುದೇವರ ಸಿಲುಬೆ ಆದಿ ಎಂಬ ಯೇಸು ಮರಣದ ಬಗ್ಗೆ ಧ್ಯಾನಿಸಿದರು. ಬಳಿಕ ಚರ್ಚ್ಗೆ ತೆರೆಳಿದ ನೂರಾರು ಜನರು ಏಸು ದೇವರ ಪಾಡು, ಮರಣದ ಬಗ್ಗೆ ಬೈಬಲ್ ಗ್ರಂಥದ ವಾಚನವನ್ನು ಓದಿದರು.
ಧರ್ಮಗುರು ಸ್ಯಾನಿಲೋಬೊ ಅವರಿಂದ ಏಸು ದೇವರ ಪ್ರಾಣ ತ್ಯಾಗ ಮಾಡಿರುವುದರ ಬಗ್ಗೆ ಪ್ರಬೋಧನೆ ನಡೆಯಿತು. ಕಲಬುರಗಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂದಾ, ಫಾದರ್ ಲಾಜರ್ ಚೇತನ್, ಇತರರು ಭಾಗಿಯಾಗಿದ್ದರು.
‘ಪ್ರಾಣ ತ್ಯಾಗ ಮಾಡಿದ ದಿನ ಗುಡ್ಪ್ರೈಡೆ’
‘ಇಡೀ ಮನುಕುಲದ ರಕ್ಷಣೆಗಾಗಿ ಶಿಲುಬೆ ಮೇಲೆ ಪ್ರಾಣ ತ್ಯಾಗ ಮಾಡಿದ ಈ ದಿನವನ್ನು ‘ಗುಡ್ ಫ್ರೈಡೇ’ ಎಂದು ಆಚರಿಸಲಾಗುತ್ತದೆ. ಸಮುದಾಯದ ಜನ ಮನೆಗಳಲ್ಲಿ ಉಪವಾಸ ಆಚರಿಸುತ್ತಾರೆ. ಯೇಸುವಿನ ಮರಣದಲ್ಲಿ ಪಾಲ್ಗೊಳ್ಳಲು ಇದೊಂದು ಅವಕಾಶ ಎಂದು ಭಾವಿಸುತ್ತಾರೆ’ ಎಂದು ಫಾದರ್ ಜೋಸೆಫ್ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.