ADVERTISEMENT

‘ಸಮಾನತೆಗಾಗಿ ಶ್ರಮಿಸಿದ ಹಡಪದ ಅಪ್ಪಣ್ಣ’: ಸಾಹಿತಿ ಚಿ.ಸಿ. ಲಿಂಗಣ್ಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 7:17 IST
Last Updated 12 ಜುಲೈ 2025, 7:17 IST
ಕಲಬುರಗಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಸಭಾಭವನದಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು 
ಕಲಬುರಗಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಸಭಾಭವನದಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು    

ಕಲಬುರಗಿ: 12ನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಹಾನ್‌ ಶಿವಶರಣ ಹಡಪದ ಅಪ್ಪಣ್ಣ ಎಂದು ಸಾಹಿತಿ ಚಿ.ಸಿ. ಲಿಂಗಣ್ಣ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿ.ಪಂ ವತಿಯಿಂದ ಏರ್ಪಡಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ಪಣ್ಣ ಅವರು ಜಾತಿ ಪದ್ಧತಿ ಹೊಡೆದೋಡಿಸಲು ತಮ್ಮ ವಚನಗಳ ಮೂಲಕ ವೈಚಾರಿಕ ಕ್ರಾಂತಿ ನಡೆಸಿದರು. ಅನುಭವ ಮಂಟಪದ ಕಾರ್ಯದರ್ಶಿಯಾಗಿ ತಮ್ಮ ಕಾಯಕವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ, ಜನರಲ್ಲಿ ಅರಿವು ಮೂಡಿಸಲು ಯತ್ನಿಸಿದ್ದರು ಎಂದು ಹೇಳಿದರು.

ADVERTISEMENT

ಶಿವಶರಣ ಹಡಪದ ಅಪ್ಪಣ್ಣನವರ 250ಕ್ಕಿಂತ ಹೆಚ್ಚಿನ ವಚನಗಳು ಲಭಿಸಿವೆ. ಅವರ ವಚನಗಳಲ್ಲಿ ಸಾಕಷ್ಟು ಅನುಭವ ಸಂದೇಶಗಳಿವೆ. ಶರಣ ವಿಚಾರಗಳನ್ನು ಅಂತರಂಗದಿಂದ ಸ್ವೀಕರಿಸಿ, ತತ್ವ ಮಾರ್ಗದಲ್ಲಿ ನಡೆಯಬೇಕು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಹಾಬಾದ್‌ ಹಡಪದ ಅಪ್ಪಣ್ಣ ದೇವಸ್ಥಾನದ ಬಾಲಬ್ರಹ್ಮಚಾರಿ ರಾಜ ಶಿವಯೋಗಿ ಸಾನ್ನಿಧ್ಯ ವಹಿಸಿ, ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಹಡಪದ ತೋನಸಳ್ಳಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಸಹಾಯಕ ನಿರ್ದೇಶಕ ಶಿವಶರಣಪ್ಪ ದನ್ನಿ ಮಾತನಾಡಿದರು.

ರೈತ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಮೇಘಾವಿ, ಹಡಪದ ಸಮಾಜದ ಮಾಜಿ ಅಧ್ಯಕ್ಷ ಸುನೀಲ ಭಾಗಹಿಪ್ಪರಗ, ಮುಖಂಡರಾದ ಮಲ್ಲಿಕಾರ್ಜುನ ಭಗದೂರಿ, ಮಹಾಂತೇಶ ಹಾವಳಿಗ, ಶ್ರೀಮಂತ ಮೊಳಗಿ, ಸಂತು ಇದಲಾಯಿ, ಮಲ್ಲಣ್ಣ ಫರತಾಬಾದ ಪಾಲ್ಗೊಂಡಿದ್ದರು.

ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಸುಭಾಷ ಚಂದ್ರ ಹಡಪದ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.