
ಚಿಂಚೋಳಿ: ಪಟ್ಟಣದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆ ಬಳಿಯ ತೇರ ಮೈದಾನದಲ್ಲಿ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರಾ ಅಮೃತ ಮಹೋತ್ಸವದ ರಥೋತ್ಸವ ಶ್ರೀಮಠದ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತಿಶ್ರದ್ಧೆ ಹಾಗೂ ಜಯಘೋಷಗಳೊಂದಿಗೆ ಗುರುವಾರ ಸಂಜೆ ಜರುಗಿತು.
ಶ್ರೀಮಠದಿಂದ ಉಚ್ಚಾಯ, ಪಲ್ಲಕ್ಕಿ ಮೆರವಣಿಗೆ ಭಜನೆ ಹಾಗೂ ವಾದ್ಯಮೇಳದೊಂದಿಗೆ ಮುಖ್ಯ ಬೀದಿಯ ಮೂಲಕ ತೇರ ಮೈದಾನಕ್ಕೆ ಆಗಮಿಸಿ ರಥಕ್ಕೆ ಐದು ಸುತ್ತು ಹಾಕಿದ ನಂತರ ರಥೋತ್ಸವ ಜರುಗಿತು.
ಮಹಾಶಿವರಾತ್ರಿಯಾದ 11ನೇ ದಿನಕ್ಕೆ ಚನ್ನಬಸವ ಶಿವಯೋಗಿಗಳು ಜನಿಸಿದ ಪ್ರಯುಕ್ತ ನಡೆಯುವ ಜಾತ್ರೆಗೆ ಪ್ರಸಕ್ತ ವರ್ಷ 75ರ ಸಂಭ್ರಮ. ಹೀಗಾಗಿ ಅಮೃತ ಮಹೋತ್ಸವ ಸಡಗರ ಶ್ರದ್ಧೆ ಮತ್ತು ಭಕ್ತಿ ಮತ್ತು ನಂಬಿಕೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು.
ತೇರ ಮೈದಾನದಲ್ಲಿ ಸಾಂಪ್ರದಾಯಿಕ ಟೋಪಿ ಧರಿಸಿ ತ್ರಿಶೂಲ ಹಿಡಿದು ಹೂವು ಹಾಸಿನ ದಾರಿಯಲ್ಲಿ ಸಾಗಿ ರಥಕ್ಕೆ ಪೂಜೆ ಸಲ್ಲಿಸಿದ ಶ್ರೀಮಠದ ಚನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಹಾರಕೂಡ ಚನ್ನಬಸವ ಶಿವಯೋಗಿ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗಿ ರಥದ ಮೇಲೆ ಉತ್ತತ್ತಿ ಎಸೆದು ಹರಕೆ ತೀರಿಸಿ ಕೃತಾರ್ಥರಾದರು.
ರಥೋತ್ಸವದ ನಂತರ ಪಟ್ಟಣದ ಮುಸಲ್ಮಾನ ಬಾಂಧವರು ಚನ್ನವೀರ ಶಿವಾಚಾರ್ಯರಿಗೆ ಸನ್ಮಾನಿಸಿ ಭಾವೈಕ್ಯತೆ ಮೆರೆದರು. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ಹೀರೆನಾಗಾಂವನ ಜಯಶಾಂತಲಿಂಗ ಮಹಾಸ್ವಾಮಿಗಳು, ಸಂಸದ ಸಾಗರ ಖಂಡ್ರೆ, ಶಾಸಕ ಡಾ.ಅವಿನಾಶ ಜಾಧವ, ಬಾಬು ಹೊನ್ನಾನಾಯಕ, ಮುಖಂಡರಾದ ಸುಭಾಶ ರಾಠೋಡ, ಅಶೋಕ ಮೊಗದಂಪುರ, ಉಮಾಪತಿ, ಕಲ್ಲಪ್ಪ ಹೊಗ್ತಾಪುರ ಅವರು ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಕೃತಿ ಲೋಕಾರ್ಪಣೆ ನಡೆಯಿತು.
ರಥೋತ್ಸವದಲ್ಲಿ ಸುಭಾಶ ಸೀಳಿನ್, ಭೀಮಶೆಟ್ಟಿ ಮುರುಡಾ, ಕೆ.ಎಂ ಬಾರಿ, ಅಬ್ದುಲ ಬಾಷಿದ್, ಜಗದೀಶಸಿಂಗ ಠಾಕೂರ, ಬಸವರಾಜ ಮಾಲಿ, ಗೌತಮ ಪಾಟೀಲ, ಅಜಿತ ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರ, ಸಂತೋಷ ಗಡಂತಿ, ನಾಗರಾಜ ಕಲಬುರಗಿ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.