
ಚಿಂಚೋಳಿ: ಪಟ್ಟಣದ ಆರಾಧ್ಯದೇವ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆಯ ಅಮೃತ ಮಹೋತ್ಸವ ಸಡಗರ – ಸಂಭ್ರಮದಿಂದ ನಡೆಯುತ್ತಿದೆ.
ಗುರುವಾರ ಶ್ರೀಮಠದಲ್ಲಿ ದಿನಪೂರ್ತಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ಭಕ್ತರು ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ ಗದ್ದುಗೆ ಹಾಗೂ ಚನ್ನವೀರ ಶಿವಾಚಾರ್ಯರ ದರ್ಶನಾಶೀರ್ವಾದ ಪಡೆದುಕೊಂಡರು.
ಬೆಳಿಗ್ಗೆ ಸಾವಿರಾರು ಮಹಿಳೆಯರು ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಗೆ ತೆರಳಿ, ಗಂಗೆಗೆ ಮತ್ತು ಪೂಜೆ ಸಲ್ಲಿಸಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬುಗ್ಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಅದರ ಮೇಲೆ ತೆಂಗಿನ ಕಾಯಿಯಿಟ್ಟುಕೊಂಡು ವಾದ್ಯಮೇಳದ ಜತೆಗೆ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿ ಅಭಿಷೇಕ ನಡೆಸಿ ಗದ್ದುಗೆ ಬಳಿ ತೆಂಗಿನ ಕಾಯಿ ಒಡೆದು ಕೃತಾರ್ಥರಾದರು.
ಅಭಿಷೇಕದ ನಂತರ ಚನ್ನಬಸವ ಶಿವಯೋಗಿಗಳ ಮೂರ್ತಿ ಅಲಂಕರಿಸಿ ಮಹಾ ಮಂಗಳಾರತಿ ಸಲ್ಲಿಸಿದ ಮೇಲೆ ಚನ್ನಬಸವ ಶಿವಯೋಗಿಗಳ ತೊಟ್ಟಿಲೋತ್ಸವ ಚನ್ನವೀರ ಶಿವಾಚಾರ್ಯರ ಸಮ್ಮುಖದಲ್ಲಿ ಜರುಗಿತು. ಬೆಳಿಗ್ಗೆಯಿಂದಲೇ ದೂರದ ಊರುಗಳಿಂದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆಗೆ ಹಣೆ ಮಣಿದು ಪುನೀತರಾದರು. ಪಟ್ಟಣದ ಭಕ್ತರು ನೈವೇದ್ಯ ತಂದು ಗದ್ದುಗೆಗೆ ಅರ್ಪಿಸಿ ಹರಕೆ ಸಲ್ಲಿಸಿದರು. ಇಡಿ ದಿನ ಮಹಾಪ್ರಸಾದ ನಡೆಯಿತು.
ನಂತರ ರಥದ ಕಳಸದ ಮೆರವಣಿಗೆ ವಾದ್ಯಮೇಳದೊಂದಿಗೆ ತೇರ ಮೈದಾನಕ್ಕೆ ತೆರಳಿತು. ಶರಣಪ್ಪ ಹಲಚೇರಿ, ಡಾ. ಬಸವೇಶ ಪಾಟೀಲ, ಕಾಶಿನಾಥ ಹಿರೇಮಠ, ರಾಜಶೇಖರ ಸಾಲಿ, ಸಂತೋಷ ಗಡಂತಿ, ಮಹಾಂತೇಶ ಮಠಪತಿ, ಸಂಗಮೇಶ ಮೂಲಿಮನಿ, ಸಂತೋಷ ಕಡಗದ, ಮಹಾಂತೇಶ ಮಜ್ಜಗಿ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.