ADVERTISEMENT

ಜಲಾಕ್ರೋಶ: ಸಂಚಾರ ಅಸ್ತವ್ಯಸ್ತ

ಅಮರ್ಜಾ ಅಣೆಕಟ್ಟೆ ಸೇರಿದಂತೆ ಹಳ್ಳಕೊಳ್ಳ ಭರ್ತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:17 IST
Last Updated 15 ಅಕ್ಟೋಬರ್ 2020, 16:17 IST
ಆಳಂದದ ಅಮರ್ಜಾ ಅಣೆಕಟ್ಟೆಯಿಂದ ನೀರು ಹೊರಬಿಟ್ಟ ನೀರು
ಆಳಂದದ ಅಮರ್ಜಾ ಅಣೆಕಟ್ಟೆಯಿಂದ ನೀರು ಹೊರಬಿಟ್ಟ ನೀರು   

ಆಳಂದ: ಮಳೆಯ ಆರ್ಭಟ ಗುರುವಾರ ತಗ್ಗಿದೆ. ಆದರೆ, ಅದು ಸೃಷ್ಟಿಸಿದ ಅವಾಂತರದಿಂದ ಜನ ತತ್ತರಿ ಹೋಗಿದ್ದಾರೆ. ತಾಲ್ಲೂಕಿನ ವಿವಿಧೆಡೆ ರಸ್ತೆ, ಸೇತುವೆ ಕೊಚ್ಚಿಹೋಗಿದ್ದರಿಂದ ಗುರುವಾರ ಕೂಡ ಸಾರಿಗೆ ಸಂಪರ್ಕ ಸಾಧ್ಯವಾಗಲಿಲ್ಲ.

ಆಳಂದ– ಗಾಣಗಾಪುರ ಮುಖ್ಯರಸ್ತೆಯ ಭೂಸನೂರು ಕ್ರಾಸ್‌ ಹತ್ತಿರದ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ರಸ್ತೆಯ ಮೇಲೆ ತಗ್ಗು ನಿರ್ಮಾಣವಾಗಿದಲ್ಲದೇ ಕಾಲ್ನಡಿಗೆಗೂ ಕಷ್ಟಕವಾಗಿದೆ. ಇದರಿಂದ ಭೂಸನೂರು, ಬಟ್ಟರ್ಗಾ, ಧಂಗಾಪುರ, ನಿಂಬರ್ಗಾ ಮಾರ್ಗವಾಗಿ ಸಂಚರಿಸಲು ಗುರುವಾರ ಸಾಧ್ಯವಾಗಲಿಲ್ಲ.

ಆಳಂದ, ಖಜೂರಿ ಹೋಬಳಿ ವಲಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಅಮರ್ಜಾ ಅಣೆಕಟ್ಟೆಯು ಸಂಪೂರ್ಣ ಭರ್ತಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಅಣೆಕಟ್ಟೆಯ ನಾಲ್ಕು ಗೇಟ್‌ ತೆರೆದು ನೀರು ಬಿಡಲಾಗುತ್ತಿದೆ. ಕಿಣಿಸುಲ್ತಾನ್‌, ಸಾಲೇಗಾಂವ, ವೈಜಾಪುರ, ಕೆರೂರು ಗ್ರಾಮದ ಕೆರೆಗಳು ಭರ್ತಿಯಾಗಿವೆ. ತೊಗರಿ, ಕಬ್ಬು, ಸೋಯಾಬಿನ್, ಶೇಂಗಾ, ಸೂರ್ಯಕಾಂತಿ ಮತ್ತು ತೋಟಗಾರಿಕೆ ಬೆಳೆಯು ಜಲಾವೃತ್ತವಾಗಿದೆ. ವಿವಿಧ ಗ್ರಾಮದಲ್ಲಿ ರೈತರ ಬಾವಿ, ಬದುವು ಕೊಚ್ಚಿ ಹೋಗಿವೆ.

ADVERTISEMENT

ವಿದ್ಯುತ್ ಕಂಬ ಧರೆಗೆ ಉರುಳಿದ ಪರಿಣಾಮ ಆಳಂದ ಪಟ್ಟಣದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ದೇಗಾಂವ– ಬಿಲಗುಂದಿ ಮತ್ತು ರಾಜಾವಾಳ– ಜಿಡಗಾ ಮಧ್ಯದ ರಸ್ತೆ ಪೂರ್ಣ ನೀರಿಗೆ ಕೋಚ್ಚಿ ಹೋದ ಪರಿಣಾಮ ಸಂಪರ್ಕ ಅಸಾಧ್ಯವಾಗಿದೆ. ಬಸವಣ್ಣ ಸಂಗೋಳಗಿಯ ದೇವಸ್ಥಾನದ ಮುಂದೆ ಹಾಕಿದ ತಡೆಗೋಡೆಯು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಭೇಟಿ: ಮಾಜಿ ಶಾಸಕ ಬಿ.ಆರ್.ಪಾಟೀಲ ಅವರು ಅಮರ್ಜಾ ಅಣೆಕಟ್ಟೆಯ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಸಮೀಕ್ಷೆಯು ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ ಅವರು ವೈಜಾಪುರ, ಬೊಮ್ಮನಳ್ಳಿ, ಖಂಡಾಳ, ಖಜೂರಿ ಗ್ರಾಮದ ವಿವಿಧೆಡೆ ಭೇಟಿ ಬೆಳೆ ಹಾನಿ ವೀಕ್ಷಿಸಿದರು. ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಅವೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.