ADVERTISEMENT

ಚಿಂಚೋಳಿ | ನೆಲ ಮೂಲದ ಸಂಸ್ಕೃತಿ ಮರೆಯದಿರಿ: ಪ್ರವೀಣ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:32 IST
Last Updated 8 ಫೆಬ್ರುವರಿ 2026, 5:32 IST
ಚಿಂಚೋಳಿ ತಾಲ್ಲೂಕಿನ ನಿಡಗುಂದಾದಲ್ಲಿ ಶನಿವಾರ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಿತು
ಚಿಂಚೋಳಿ ತಾಲ್ಲೂಕಿನ ನಿಡಗುಂದಾದಲ್ಲಿ ಶನಿವಾರ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಿತು   

ಚಿಂಚೋಳಿ: ‘ಇಂದು ಮುಸ್ಲಿಂ ದೇಶಗಳು ಎಂದು ಕರೆಸಿಕೊಳ್ಳುವ ಹಲವು ದೇಶಗಳು ಹಿಂದೆ ನಮ್ಮ ಹಿಂದೂಗಳ ಆಳ್ವಿಕೆಯಲ್ಲಿದ್ದವು’ ಎಂದು ಆರ್‌ಎಸ್‌ಎಸ್‌ನ ಸೇಡಂ ವಕ್ತಾರ ಪ್ರವೀಣ ಕುಲಕರ್ಣಿ ಹೇಳಿದರು.

ತಾಲ್ಲೂಕಿನ ನಿಡಗುಂದಾದ ತೇರ್ ಮೈದಾನದಲ್ಲಿ ಹಿಂದೂ ಸಮ್ಮೇಳನ ಆಯೋಜನಾ ಸಮಿತಿಯಿಂದ ಶನಿವಾರ ಸಂಜೆ ನಡೆದ ಹಿಂದೂ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಇಂದಿನ ಅಫಘಾನಿಸ್ತಾನ, ಇರಾನ್, ಇರಾಕ್ ಸೇರಿ ಹಲವು ರಾಷ್ಟ್ರಗಳು ಹಿಂದೆ ಹಿಂದೂಗಳು ಆಳ್ವಿಕೆ ಮಾಡಿದ ಸ್ಥಳಗಳಾಗಿವೆ. ಒಂದೊಮ್ಮೆ ಇಡೀ ವಿಶ್ವ ಆಳಿದ ಹಿಂದೂಗಳು ಇಂದು ಕೆಲವೇ ಪ್ರದೇಶಗಳಿಗೆ ಸೀಮಿತರಾಗಿದ್ದೇವೆ’ ಎಂದರು.

ADVERTISEMENT

'ಹಿಂದೂ ಧರ್ಮಕ್ಕೆ ಪ್ರಭು ಶ್ರೀರಾಮನೇ ಆದರ್ಶ. ಅದರಂತೆ ಮಹಾತ್ಮ ಗಾಂಧಿ ಅವರು ತಮ್ಮ ಜೀವನದ ಉದ್ದಕ್ಕೂ ರಾಮ ರಾಜ್ಯ ನಿರ್ಮಾಣ ಎಂದು ಹೇಳುತ್ತಿದ್ದರು. ಅಂದರೆ, ಯಾವುದೇ ಅನ್ಯಾಯ, ಅಸಮಾನತೆ ಇಲ್ಲದ ಶ್ರೇಷ್ಠ ಆಡಳಿತ ನೀಡಿದ ಶ್ರೀರಾಮನನ್ನು ನಾವೆಲ್ಲರೂ ಆದರ್ಶವಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ನಿಡಗುಂದಾ ರಾಮಗಿರಿ ಮಠದ ಉಮೇಶ್ವರ ಸ್ವಾಮೀಜಿ, ಮಳಖೇಡದ ಅಭಿನವ ಕಾರ್ತಿಕೇಶ್ವರ ಸ್ವಾಮೀಜಿ, ಟೆಂಗಳಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡ ಮಲ್ಲರೆಡ್ಡಿ ನಾಮಲ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಶರಣು ಮೆಡಿಕಲ್, ಮುಕುಂದ ದೇಶಪಾಂಡೆ, ದಿನೇಶ್ ರೆಡ್ಡಿ, ಸಂಪತ ಸಜ್ಜನ, ವೆಂಕಟಪ್ಪ ಮಡಿವಾಳ, ಶ್ರೀನಿವಾಸ ಶೆರಗಾರ, ರಾಜು ಹಲಿಗಿ, ಚಂದ್ರು ಕೊರಬ, ಸೋಮನಾಥ ಶಿರೂಳ್ಳಿ, ರಮೇಶ್ ಕಾವಲಿಕಾರ, ಸತೀಶ್ ಕರನಕೊಟ್, ಶ್ರೀಕಾಂತ ತಳವಾರ, ಬಸ್ಸು ಕೊಡ್ಲಿ, ಶಂಕರ ಕರನಕೊಟ್, ರಾಕೇಶ್ ಚೌದ್ರಿ ಸೇರಿ ಗ್ರಾಮದ ಹಲವರು ಪಾಲ್ಗೊಂಡಿದ್ದರು.

ಅದ್ಧೂರಿ ಶೋಭಾಯಾತ್ರೆ ಹಿಂದೂ ಸಮ್ಮೇಳನದ ಬಹಿರಂಗ ಸಭೆಗೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾರತ ಮಾತೆಯ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಡೊಳ್ಳು ಹಲಗೆಗಳ ಜತೆ ಯುವಕರು ಇಡೀ ಮೆರವಣಿಗೆಯಲ್ಲಿ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.