
ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರ್ಸ್ (ಐಇಇಇ) ಬೆಂಗಳೂರು ವಿಭಾಗದ ‘ಅತ್ಯುತ್ತಮ ವಿದ್ಯಾರ್ಥಿ ಶಾಖೆ-2025’ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಐಇಇಇ ಸಂಸ್ಥೆ ಇಂಜಿನಿಯರಿಂಗ್ ಶಿಕ್ಷಣದ ಅಭಿವೃದ್ಧಿ ಹಾಗೂ ನವೀಕರಣದಲ್ಲಿ ತೊಡಗಿಸಿಕೊಂಡಿದ್ದು ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಒದಗಿಸುತ್ತದೆ.
ಈಚೆಗೆ ಬೆಂಗಳೂರಿನಲ್ಲಿ ಶರಣಬಸವ ವಿಶ್ವವಿದ್ಯಾಲಯದ ಆಶಾರಾಣಿ ಪಾಟೀಲ ಅವರಿಗೆ ಬೆಂಗಳೂರು ವಿಭಾಗದ ಐಇಇಇ ಅಧ್ಯಕ್ಷ ಚಂದ್ರಕಾಂತಕುಮಾರ, ಐಐಎಸ್ಸಿ ಪ್ರಾಧ್ಯಾಪ ಶ್ರೀನಿವಾಸನ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ನಾಯಕತ್ವ, ಶ್ರೇಷ್ಠತೆ, ಉತ್ತಮ ತಾಂತ್ರಿಕ ಚಟುವಟಿಕೆಗಳು, ಸದಸ್ಯರ ತೊಡಗಿಸಿಕೊಳ್ಳುವಿಕೆ, ನಾವೀನ್ಯತೆ ಮೂಲಕ ಸಮಾಜದ ಪ್ರಯೋಜನಕ್ಕಾಗಿ ತಂತ್ರಜ್ಞಾನ ಮುಂದುವರಿಸುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
‘ಕಳೆದ ಒಂದು ವರ್ಷದಲ್ಲಿ ಶರಣಬಸವ ವಿಶ್ವವಿದ್ಯಾಲಯ ನಡೆಸಿದ ತಾಂತ್ರಿಕ ಕಾರ್ಯಕ್ರಮಗಳು ಸೇರಿದಂತೆ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ, ಸದಸ್ಯತ್ವ ಅಭಿಯಾನ ಪರಿಗಣಿಸಿ ನಮ್ಮ ವಿವಿಯನ್ನು ಆಯ್ಕೆ ಮಾಡಲಾಗಿದೆ’ ಎಂದು ವಿವಿ ಡೀನ್ ಲಕ್ಷ್ಮೀ ಪಾಟೀಲ ಮಾಕಾ ತಿಳಿಸಿದ್ದಾರೆ.
ಶರಣಬಸವ ವಿಶ್ವವಿದ್ಯಾಲಯ 60ಕ್ಕೂ ಹೆಚ್ಚು ವಿದ್ಯಾರ್ಥಿ ಕೇಂದ್ರಿತ ತಾಂತ್ರಿಕ ಹಾಗೂ ತಾಂತ್ರಿಕೇತರ ಚಟುವಟಿಕೆಗಳನ್ನು ನಡೆಸಿದೆ.
ದಾಕ್ಷಾಯಿಣಿ ಎಸ್.ಅಪ್ಪ, ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಎಸ್.ಜಿ. ಡೊಳ್ಳೇಗೌಡರ್, ಕುಲಸಚಿವ (ಮೌಲ್ಯಮಾಪನ) ಎಸ್. ಎಚ್.ಹೊನ್ನಳ್ಳಿ ಪ್ರಶಸ್ತಿ ತಂದಿರುವ ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಆಶಾರಾಣಿ ಪಾಟೀಲ ಅವರು ವಿವಿ ಪರವಾಗಿ ‘ಅತ್ಯುತ್ತಮ ವಿದ್ಯಾರ್ಥಿ ಶಾಖೆ-2025’ ಪ್ರಶಸ್ತಿಯ ಪ್ರಮಾಣಪತ್ರ ಸ್ವೀಕರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.