ADVERTISEMENT

ಕಲಬುರಗಿ | ಕ್ಯಾನ್ಸರ್‌ಗೆ ಆರಂಭಿಕ ತಪಾಸಣೆ ಮಹತ್ವದ್ದು: ಗುರುರಾಜ್ ಕುಲಕರ್ಣಿ

ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಗುರುರಾಜ್ ಕುಲಕರ್ಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:13 IST
Last Updated 5 ಫೆಬ್ರುವರಿ 2026, 4:13 IST
ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ
ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ   
ವರ್ಷದಲ್ಲಿ 103 ಉಚಿತ ಶಿಬಿರ ಆಯೋಜನೆ | 8 ಸಾವಿರಕ್ಕೂ ಅಧಿಕ ಮಂದಿ ತಪಾಸಣೆ| ಪುರುಷರಲ್ಲಿ ಹೆಚ್ಚಾಗಿ ಬಾಯಿ ಕ್ಯಾನ್ಸರ್‌ ಪತ್ತೆ

ಕಲಬುರಗಿ: ‘ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲ. ಆದರೂ, ಇತ್ತೀಚೆಗೆ ಅನೇಕರು ಈ ರೋಗದಿಂದ ಬಳಲುತ್ತಿದ್ದಾರೆ. ಆದರೆ, ದೇಶದಲ್ಲಿ ಮೊದಲನೇ ಹಂತದಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವ ಜನರ ಪ್ರಮಾಣ ಕೇವಲ ಶೇ 12-13ರಷ್ಟಿದೆ’ ಎಂದು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕ ಘಟಕದ ಕಲಬುರಗಿ ಪ್ರಾದೇಶಿಕ ವ್ಯವಸ್ಥಾಪಕ ಗುರುರಾಜ್ ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.

ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕಲಬುರಗಿ ಪ್ರಾದೇಶಿಕ ಕಚೇರಿ, ಜಿಮ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಎನ್‌ಸಿಡಿ, ವಿಟಿಎಸ್ಎಂ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಕಲಬುರಗಿ ಸಹಯೋಗದೊಂದಿಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕ್ಯಾನ್ಸರ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ಒಟ್ಟಾರೆ ಎಲ್ಲಾ ಬಗೆಯ ಕ್ಯಾನ್ಸರ್ ನೋಡಿದಾಗ ಶೇ 40 ಬಾಯಿ ಕ್ಯಾನ್ಸರ್, ಮಹಿಳೆಯರಲ್ಲಿ ಶೇ 27ರಷ್ಟು ಮಂದಿ ಸ್ತನ ಕ್ಯಾನ್ಸರ್ ಮತ್ತು ಶೇ 23ರಷ್ಟು ಮಂದಿ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ’ ಎಂದರು.

ADVERTISEMENT

‘ನಮ್ಮ ಜೀವನಶೈಲಿ, ಆಹಾರ ಪದ್ಧತಿ, ವ್ಯಾಯಾಮ/ ದೈಹಿಕ ಶ್ರಮ ಇಲ್ಲದಿರುವುದು, ಕರಿದ ಪದಾರ್ಥಗಳು– ಬೇಕರಿ ತಿನಿಸುಗಳ ಅತಿಯಾದ ಸೇವನೆಯೇ ಬಹುತೇಕ ಕಾರಣಗಳಾಗಿವೆ. ಕ್ಯಾನ್ಸರ್ ಮೊದಲ ಹಂತದಲ್ಲೇ ಪತ್ತೆ ಹಚ್ಚಿದಲ್ಲಿ ಸುಮಾರು ಶೇ 80ರಷ್ಟು ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಕ್ಯಾನ್ಸರ್ ರೋಗಕ್ಕೆ ಜಾಗೃತಿಯೇ ರಾಮಬಾಣ’ ಎಂದರು.

‘2025-26 ವರ್ಷದಲ್ಲಿ ಒಟ್ಟು 103 ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಸುಮಾರು 8,491 ಜನರಿಗೆ ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ 5,618 ಮಹಿಳೆಯರಿಗೆ ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಹಾಗೂ 2,873 ಪುರುಷರಿಗೆ ಬಾಯಿ ಕ್ಯಾನ್ಸರ್ ತಪಾಸಣೆ ಮಾಡಲಾಗಿದೆ. ಇವರಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದವರಿಗೆ ಹೆಚ್ಚಿನ ಪರೀಕ್ಷೆಗಾಗಿ ಕಲಬುರಗಿಯ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದರು. 

ಕಿದ್ವಾಯಿ ಕ್ಯಾನ್ಸರ್ ಕಲಬುರಗಿ ಆಸ್ಪತ್ರೆಯ ಪ್ರಭಾರ ಅಧಿಕಾರಿ ಡಾ.ಗುರುರಾಜ ದೇಶಪಾಂಡೆ ಮಾತನಾಡಿದರು.

ಜಾಗೃತಿ ಜಾಥಾಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಕೇಶ ಕಾಂಬ್ಳೆ ಚಾಲನೆ ನೀಡಿದರು. ನಗರದ ರಾಜೀವ್‌ ಗಾಂಧಿ ಫಾರ್ಮಸಿ ಕಾಲೇಜು, ಎಚ್‌ಕೆಇ ಸಂಸ್ಥೆಯ ಫಾರ್ಮಸಿ ಮತ್ತು ಡೆಂಟಲ್ ಕಾಲೇಜು, ಸರ್ಕಾರಿ ನರ್ಸಿಂಗ್‌ ಶಾಲೆ ಮತ್ತು ಕಾಲೇಜು, ಅಲ್ ಬದರ್ ಡೆಂಟಲ್ ಕಾಲೇಜಿನ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಪ್ರಮುಖರಾದ ಶ್ರೀನಿಧಿ ನಾಯ್ಕಲ್, ಡಾ.ಸುಷ್ಮಿತಾ, ದೇವೇಂದ್ರ, ಕೀರ್ತಿ, ಸೋನಿಯಾ, ಅಶ್ವಿನಿ ಮತ್ತು ಶೈಲಜಾ, ಸಂಜೀವಕುಮಾರ, ದಿಗಂಬರ, ನಾಗಣ್ಣಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.