ಕಲಬುರಗಿ: ‘ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿದ್ದ ನಾನು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಭಾರತಕ್ಕೆ ವಾಪಸಾದೆ. ಪ್ರಿಲಿಮ್ಸ್, ಮೇನ್ಸ್ ಎರಡರಲ್ಲೂ ಉತ್ತಮ ಸಾಧನೆ ಮಾಡಿದೆ. ಸಂದರ್ಶನದಲ್ಲಿ ವಿಫಲವಾದೆ. ಆದರೆ, ಪಟ್ಟು ಬಿಡದೇ ಎರಡನೇ ಯತ್ನದಲ್ಲಿ ಉತ್ತಮ ಅಂಕ ಪಡೆದು ಐಪಿಎಸ್ ಹುದ್ದೆಗೆ ಆಯ್ಕೆಯಾದೆ. ಹೀಗಾಗಿ ಸೋಲಿಗೆ ಎದೆಗುಂದಬಾರದು...’
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಹೀಗೆ ಹೇಳುತ್ತಲೇ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಐಎಎಸ್/ಐಪಿಎಸ್ ಸ್ಪರ್ಧಾಕಾಂಕ್ಷಿಗಳ ಕಣ್ಣಲ್ಲಿ ಮಿಂಚು ಹೊಳೆಯಿತು. ಐಎಎಸ್ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ 35 ನಿಮಿಷಗಳವರೆಗೆ ಮಾತನಾಡಿದ ಅವರು, ತಮ್ಮ ಜೀವನದ ಹಲವು ಘಟನೆಗಳನ್ನು ಉದಾಹರಣೆಯಾಗಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಅದರಲ್ಲೂ ವಿದ್ಯಾರ್ಥಿನಿಯರು ಇವರ ಮಾತುಗಳನ್ನು ಕೇಳಿ ಸ್ಫೂರ್ತಿ ಪಡೆದುಕೊಂಡರು.
‘ನಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದರ ಬಗ್ಗೆ ನಮಗೇ ಅರಿವು ಇರುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟು ದೊಡ್ಡ ಗುರಿಯನ್ನೇ ಹೊಂದಬೇಕು. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವವರು ನಿತ್ಯ ಇಷ್ಟೇ ಗಂಟೆ ಓದಬೇಕು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಬದಲಾಗಿ ಒಂದೊಂದು ಅಧ್ಯಾಯಗಳನ್ನು ಸಮಗ್ರವಾಗಿ ಓದುವ, ಓದಿದ್ದನ್ನು ಮನನ ಮಾಡುವುದಕ್ಕೆ ಹೆಚ್ಚು ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.
ಪತ್ರಿಕೆಗಳ ಓದು ಸಹಾಯವಾಯಿತು: ನಾನು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ದಿನಾಲೂ ಪ್ರಮುಖ ಇಂಗ್ಲಿಷ್ ಪತ್ರಿಕೆಗಳನ್ನು ಓದಿ ಪ್ರಮುಖ ವರದಿಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಿದ್ದೆ. ಪರೀಕ್ಷೆ ಬರೆಯುವವರು ನಿತ್ಯವೂ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ಕರ್ನಾಟಕದಲ್ಲಿ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ನಿಖರ ಸುದ್ದಿ, ವಿಶ್ಲೇಷಣೆಗಾಗಿ ಹೆಸರುವಾಸಿಯಾಗಿವೆ ಎಂದು ಎಸ್ಪಿ ಇಶಾ ಪಂತ್ ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.