ADVERTISEMENT

ಶುದ್ಧ ನೀರು ಪೂರೈಕೆಗೆ ಒತ್ತಾಯ: ಸಂಘಟನೆಯಿಂದ ಪ್ರತಿಭಟನೆ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 3:11 IST
Last Updated 26 ಜುಲೈ 2022, 3:11 IST
ಕಲಬುರಗಿ ಜನರಿಗೆ ಕುಡಿಯಲು ಶುದ್ಧ ನೀರು ಒದಗಿಸುವಂತೆ ಆಗ್ರಹಿಸಿ ಸೋಮವಾರ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಅಶುದ್ಧ ನೀರಿನ ಬಾಟಲ್ ‍ಪ್ರದರ್ಶಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು
ಕಲಬುರಗಿ ಜನರಿಗೆ ಕುಡಿಯಲು ಶುದ್ಧ ನೀರು ಒದಗಿಸುವಂತೆ ಆಗ್ರಹಿಸಿ ಸೋಮವಾರ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಅಶುದ್ಧ ನೀರಿನ ಬಾಟಲ್ ‍ಪ್ರದರ್ಶಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು   

ಕಲಬುರಗಿ: ‘ನಗರದ ವಿವಿಧ ಬಡಾವಣೆಗಳಲ್ಲಿ ಮಲಿನ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಶುದ್ಧೀಕರಿಸಿದ ನೀರು ಪೂರೈಸಲು ಈಗಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಬಸವೇಶ್ವರ ನಗರ, ರಾಮಜಿ ನಗರ, ಇಂದಿರಾ ನಗರ, ಹನುಮ ನಗರ, ಹೀರಾಪುರ, ಸಂಜೀವ ನಗರ, ಹಮಾಲವಾಡಿ ಬಡಾವಣೆಗಳಲ್ಲಿ ಕೆಲ ದಿನಗಳಿಂದ ಕೊಳಚೆ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಮಲಿನ ನೀರು ಪೂರೈಕೆಯಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ನಗರದ ರೈಲು ನಿಲ್ದಾಣ, ಓಂನಗರ, ಶಹಾಬಜಾರ್, ಮುಸ್ಲಿಂ ಚೌಕ, ದರ್ಗಾ ಇತ್ಯಾದಿ ಹತ್ತಾರು ಕಡೆ ಪ್ರತಿದಿನ ಮುಂಜಾನೆ ನೂರಾರು ಕಾರ್ಮಿಕರು ಕೆಲಸಕ್ಕಾಗಿ ನೆರೆಯುತ್ತಿರುತ್ತಾರೆ. ಅಲ್ಲೆಲ್ಲ ಅಕ್ಷರಶಃ ಮಾನವ ಸಂತೆ ಸೇರಿರುತ್ತದೆ. ನಸುಕಿನಲ್ಲೇ ಅಡುಗೆ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಸೂರ್ಯ ಮೂಡುವಷ್ಟರಲ್ಲಿ ರಸ್ತೆ ಬದಿಯಲ್ಲಿ ಗ್ರಾಹಕರಿಗಾಗಿ ಕಾದು ನಿಲ್ಲುತ್ತಾರೆ. ಇಷ್ಟಿದ್ದರೂ ಸೇರಿದವರ ಪೈಕಿ ಶೇ 20ರಷ್ಟು ಕೂಲಿಯಾಳುಗಳು ಮಾತ್ರ ಕೆಲಸ ದೊರೆತು ಉಳಿದವರು ವಾಪಸಾಗುತ್ತಾರೆ. ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದರು.

ADVERTISEMENT

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ. ನೀಲಾ, ಜಿಲ್ಲಾ ಘಟಕದ ಅಧ್ಯಕ್ಷೆ ಚಂದಮ್ಮ ಗೋಳಾ, ಕಾರ್ಯದರ್ಶಿ ಪದ್ಮಿನಿ ಕಿರಣಗಿ, ಖಜಾಂಚಿ ಜಗದೇವಿ ನೂಲಕರ, ಸಹ ಕಾರ್ಯದರ್ಶಿ ಸೈನಾಜ್ ಅಕ್ತರ್,ಇಂದುಮತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.