ADVERTISEMENT

ಜೇವರ್ಗಿ: ಫೆ. 5ರಂದು ತತ್ವಪದಕಾರರ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:52 IST
Last Updated 2 ಫೆಬ್ರುವರಿ 2026, 2:52 IST
ಸಿದ್ದರಾಮ ಶಿವಾಚಾರ್ಯರು
ಸಿದ್ದರಾಮ ಶಿವಾಚಾರ್ಯರು   

ಜೇವರ್ಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆ.5ರಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಪ್ರಥಮ ತತ್ವಪದಕಾರರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಧ್ಯಕ್ಷರಾಗಿ ಶಖಾಪುರ ತಪೋವನ ಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಅಂದು ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದಿಂದ ಸಮ್ಮೇಳನದ ವೇದಿಕೆಯವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಂತರ ಷಣ್ಮುಖ ಶಿವಯೋಗಿಗಳ ವೇದಿಕೆಯಲ್ಲಿ ನಡೆಯುವ ಸಮ್ಮೇಳನವನ್ನು ಡಾ.ಅಜಯಸಿಂಗ್ ಉದ್ಘಾಟಿಸಲಿದ್ದು, ನೆಲೋಗಿ ಸಿದ್ದಲಿಂಗ ಸ್ವಾಮೀಜಿ, ಪಾಳಾದ ಗುರುಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

ADVERTISEMENT

ಶಿರಸಗಿಯ ಬಸವರಾಜ ಶರಣರು ಆಶಯ ನುಡಿಗಳನ್ನಾಡುವರು. ‘ಹಾಡಿತು ತಪೋವನ ಕೋಗಿಲೆ’ ಮತ್ತು ‘ತಪೋವನ ತತ್ವದರ್ಶನ’ ಕೃತಿಯನ್ನು ಕೇಂದ್ರೀಯ ವಿವಿ ಕುಲಸಚಿವ ಆರ್.ಆರ್. ಬಿರಾದಾರ ಬಿಡುಗಡೆ ಮಾಡುವರು ಎಂದರು.

ಮಧ್ಯಾಹ್ನ ಎರಡು ಗೋಷ್ಠಿಗಳಿದ್ದು, ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚೌಡಾಪುರದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ, ಗುವಿವಿ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅಧ್ಯಕ್ಷತೆ ವಹಿಸುವರು. ಚಿತ್ರನಟ ಚೇತನಕುಮಾರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.

ಕಸಾಪ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಕಾರ್ಯದರ್ಶಿ ಕಲ್ಯಾಣಕುಮಾರ ಸಂಗಾವಿ, ಸಾಹಿತಿ ಸುನಂದಾ ಕಲ್ಲಾ, ಶ್ರೀಹರಿ ಕರಕಿಹಳ್ಳಿ, ಬಸಮ್ಮ ಹೂಗಾರ, ಉಮಾಕಾಂತ ಗೋಲಗೇರಿ, ಎಸ್.ಎ.ಪಡಶೆಟ್ಟಿ, ಬಂಗಾರೆಪ್ಪ ಆಡೀನ್ ಇದ್ದರು.

ಸಮ್ಮೇಳನ ಅಧ್ಯಕ್ಷರ ಪರಿಚಯ

ಜೇವರ್ಗಿ ತಾಲ್ಲೂಕಿನ ಶಖಾಪುರ ವಿಶ್ವರಾಧ್ಯ ಹಾಗೂ ಬಸವಾಂಬೆತಾಯಿ ತಪೋವನಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರು ಶಿಕ್ಷಣ ಪ್ರೇಮಿಗಳು. ಕಲೆ ಸಾಹಿತ್ಯ ಸಂಗೀತದ ಆರಾಧಕರಾಗಿದ್ದಾರೆ. ಶ್ರೀ ವಿಶ್ವರಾಧ್ಯ ಪ್ರಕಾಶನದ ಮೂಲಕ ತಪೋವನ ತತ್ವದರ್ಶನ ಸಿದ್ದರಾಮ ಶಿವಯೋಗಿಗಳು ವಚನ ವಾಹಿನಿ ವಿಶ್ವಾಮೃತ ವಚನಗಳು ಸಾಹಿತ್ಯ ಸಾರಥಿ ಜನಪದ ಜೇನು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಲಿಂಗದೀಕ್ಷೆಯ ಮೂಲಕ ಸ್ವಧರ್ಮ ಕಾರ್ಯದ ಜತೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಊಟ ವಸತಿ ಜ್ಞಾನದ ದಾಸೋಹ ಗೈಯುತ್ತಿದ್ದಾರೆ. ಶ್ರೀಗಳ ಸಾಧನೆಗೆ ಕೊಯಮತ್ತೂರು ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.